ಯುಪಿಎಸ್‌ಸಿ ಮುಖ್ಯ ಪರೀಕ್ಷೆ 2020 ಅಂತಿಮ ಫಲಿತಾಂಶ; ಭೋಪಾಲ್ ಎಲೆಕ್ಟ್ರಿಕಲ್ ಇಂಜಿನಿಯರ್ ಗೆ ಅಗ್ರಸ್ಥಾನ, ಪಟ್ಟಿಯಲ್ಲಿ ಕರ್ನಾಟಕದ ಕಲಿಗಳು

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ನಾಗರಿಕ ಸೇವೆಗಳ (ಸಿಎಸ್‌ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಮಹಿಳೆಯರ ವಿಭಾಗದಲ್ಲಿ ಭೋಪಾಲ್ ಮೂಲದ ಎಲೆಕ್ಟ್ರಿಕಲ್ ಇಂಜಿನಿಯರ್ ಗೆ ಅಗ್ರಸ್ಥಾನ ಲಭಿಸಿದೆ.
ಯುಪಿಎಸ್ ಸಿ
ಯುಪಿಎಸ್ ಸಿ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ನಾಗರಿಕ ಸೇವೆಗಳ (ಸಿಎಸ್‌ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಮಹಿಳೆಯರ ವಿಭಾಗದಲ್ಲಿ ಭೋಪಾಲ್ ಮೂಲದ ಎಲೆಕ್ಟ್ರಿಕಲ್ ಇಂಜಿನಿಯರ್ ಗೆ ಅಗ್ರಸ್ಥಾನ ಲಭಿಸಿದೆ.

ಭೋಪಾಲ್ ಮೂಲದ ಜಾಗೃತಿ ಅವಸ್ಥಿ ಎಂಬ ಎಲೆಕ್ಟ್ರಿಕಲ್ ಇಂಜಿನಿಯರ್ ತಮ್ಮ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಮಾತ್ರವಲ್ಲದೇ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಐಐಟಿ ಬಾಂಬೇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಶುಭಂ ಕುಮಾರ್ ನಾಗರಿಕ ಸೇವೆ (ಮುಖ್ಯ) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.  ಜಾಗೃತಿ ಅವಸ್ಥಿ ದ್ವಿತೀಯ ಸ್ಥಾನ ಹಾಗೂ ಅಂಕಿತಾ ಜೈನ್ (ಶ್ರೇಣಿ 3) ಮೂರನೇ ಸ್ಥಾನ ಪಡೆದರು ಎಂದು ಯುಪಿಎಸ್ ಸಿ ತಿಳಿಸಿದೆ.

ಭೋಪಾಲ್‌ನ ಶಿವಾಜಿ ನಗರ ಪ್ರದೇಶದಲ್ಲಿ ಹೋಮಿಯೋಪತಿ ಪ್ರಾಧ್ಯಾಪಕ ಡಾ.ಸುರೇಶ್ ಚಂದ್ರ ಅವಸ್ಥಿಯವರ ಕುಟುಂಬಸ್ಥರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ 2020 ಅಂತಿಮ ಫಲಿತಾಂಶದಲ್ಲಿ ತಮ್ಮ ಮಗಳು ಜಾಗೃತಿ ಅವಸ್ಥಿ ಅವರ ಐತಿಹಾಸಿಕ ಯಶಸ್ಸಿನ ಸುದ್ದಿ ಬರುತ್ತಿದ್ದಂತೆ ಸಂಭ್ರಮದಲ್ಲಿ ಮುಳುಗಿದರು. ಇಬ್ಬರು ಮಕ್ಕಳಲ್ಲಿ ಹಿರಿಯ ಪುತ್ರ (ಎಂಬಿಬಿಎಸ್ ವಿದ್ಯಾರ್ಥಿ ಸಹೋದರ ಸುಯಾಶ್ ಚಿಕ್ಕವರು) ಜಾಗೃತಿ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಕೇವಲ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾದರು. ಆದರೆ ಒಟ್ಟಾರೆ ಎರಡನೇ ಶ್ರೇಯಾಂಕ ಮತ್ತು ರಾಷ್ಟ್ರಮಟ್ಟದಲ್ಲಿ ಮಹಿಳಾ ಟಾಪರ್ ಆಗಿದ್ದಾರೆ.

2021 ರ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಡೆದ ಲಿಖಿತ ಪರೀಕ್ಷೆ ಹಾಗೂ  ವ್ಯಕ್ತಿತ್ವ ಪರೀಕ್ಷೆಯ ಆಧಾರದ ಮೇಲೆ ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. 151 ಅಭ್ಯರ್ಥಿಗಳ ಉಮೇದುವಾರಿಕೆಯು ತಾತ್ಕಾಲಿಕವಾಗಿದೆ. ಅಭ್ಯರ್ಥಿಗಳು upsc.gov.in ನಲ್ಲಿ ಮೆರಿಟ್ ಪಟ್ಟಿಯನ್ನು ಪರಿಶೀಲಿಸಬಹುದು.

ಮೊದಲ ಸ್ಥಾನ ಪಡೆದಿರುವ  ಶುಭಂ ಕುಮಾರ್ ಐಐಟಿ ಬಾಂಬೆಯಿಂದ ಬಿ ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಒಟ್ಟಾರೆ ಎರಡನೇ ಶ್ರೇಯಾಂಕ ಪಡೆದ ಜಾಗೃತಿ ಅವಸ್ಥಿ ಮಹಿಳಾ ಅಭ್ಯರ್ಥಿಗಳಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಜಾಗೃತಿ ಅವರು ಮನಿತ್ ಭೋಪಾಲ್‌ನಿಂದ ಬಿ ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಅಗ್ರ 25 ಅಭ್ಯರ್ಥಿಗಳ ಪೈಕಿ 13 ಪುರುಷರು ಹಾಗೂ 12 ಮಹಿಳೆಯರಿದ್ದಾರೆ ಯುಪಿಎಸ್ ಸಿ ಪತ್ರಿಕಾ ಬಿಡುಗಡೆಯಲ್ಲಿ ತಿಳಿಸಿದೆ.

ಯುಪಿಎಸ್ ಸಿಯಲ್ಲಿ ಪಟ್ಟಿಯಲ್ಲಿ ಕರ್ನಾಟಕದ ಕಲಿಗಳು
ಇನ್ನು ಯುಪಿಎಸ್ ಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ ಹಲವು ಅಭ್ಯರ್ಥಿಗಳಿದ್ದು, ಚಾಮರಾಜನಗರ ಜಿಲ್ಲೆಯ ರೈತ ದಂಪತಿ ಮಗ ಪ್ರಮೋದ್‌ಗೆ 601ನೇ ಸ್ಥಾನ ಗಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದಮಾದಹಳ್ಳಿಯ ರೈತ ರುದ್ರಾರಾಧ್ಯ ಹಾಗೂ ಮಮತಾಮಣಿ ದಂಪತಿಯ ಹಿರಿಯ ಮಗನಾಗಿರುವ 25 ವರ್ಷದ ಪ್ರಮೋದ್‌ ಅವರು ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. 

ಅಂತೆಯೇ ಎಚ್.ಡಿ.ಕೋಟೆಯ ಸೇಂಟ್‌ ಮೇರಿಸ್‌ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿರುವ ಪ್ರಮೋದ್‌ ಅವರು, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ ಹಾಗೂ ಮಂಡ್ಯದ ಪಿಇಎಸ್‌ ಎಂಜಿನಿಯರಿಂ‌ಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದ್ದಾರೆ. ಇತ್ತ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ಸಾಗರ ವಾಡಿ ಎಂಬ ವಿದ್ಯಾರ್ಥಿ 385ನೇ ಸ್ಥಾನಗಳಿಸಿದ್ದು, ಸಾಗರ್‌ ಅವರು ಸದ್ಯ ಕೇಂದ್ರ ಸರ್ಕಾರದ ಇಂಧನ ಇಲಾಖೆಯಲ್ಲಿ 2014ರಿಂದ ಡೆಪ್ಯೂಟಿ ಮ್ಯಾನೇಜರ್‌ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದರಿಂದ ಐದನೇ ತರಗತಿ ವರೆಗೆ ಸಿಂದಗಿ ತಾಲ್ಲೂಕಿನ ಕೋರವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಹಾಗೂ ಆರರಿಂದ ದ್ವಿತೀಯ ಪಿಯುಸಿ ವರೆಗೆ ಆಲಮಟ್ಟಿಯ ಜವಾಹರ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಎಲೆಕ್ಟ್ರಿಕ್ಸ್‌ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com