ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿ ಆ.30ರವರೆಗೆ ಪೊಲೀಸ್ ಕಸ್ಟಡಿಗೆ

ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಕರೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ 56 ವರ್ಷದ ಆರೋಪಿಯನ್ನು ಮಂಗಳವಾರ ಮುಂಬೈನ 37ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಗಸ್ಟ್ 30ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ (ಚಿತ್ರ-ಪಿಟಿಐ)
ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ (ಚಿತ್ರ-ಪಿಟಿಐ)

ಮುಂಬೈ: ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಕರೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ 56 ವರ್ಷದ ಆರೋಪಿಯನ್ನು ಮಂಗಳವಾರ ಮುಂಬೈನ 37ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಗಸ್ಟ್ 30ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಆರೋಪಿಯನ್ನು ವಿಷ್ಣು ಭೌಮಿಕ್ ಎಂದು ಗುರುತಿಸಲಾಗಿದ್ದು, ಆಗಸ್ಟ್ 15ರಂದು ದಹಿಸರ್‌ನಿಂದ ದಕ್ಷಿಣ ಮುಂಬೈನ ಡಿಬಿ ಮಾರ್ಗ್ ಪೊಲೀಸರ್ ಠಾಣೆಗೆ ಕರೆತರಲಾಗಿತ್ತು.

'ಬೆದರಿಕೆ ಕರೆಯನ್ನು ಸ್ವಾತಂತ್ರ್ಯ ದಿನಾಚರಣೆಯಂದು ಮಾಡಲಾಗಿದೆ. ಆದ್ದರಿಂದ ಇದರ ಹಿಂದೆ ಉದ್ದೇಶ ಮತ್ತು ಪ್ರಭಾವವಿದೆ. ಈ ವ್ಯಕ್ತಿಯು ಬೇರೆ ದಿನಗಳಲ್ಲಿ ಏಕೆ ಬೆದರಿಕೆ ಕರೆ ಮಾಡಲಿಲ್ಲ. ಈಗಾಗಲೇ ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಇದೆ ಮತ್ತು ಈತ ನಿರ್ದಿಷ್ಟವಾಗಿ ಅವರಿಗೆ ಮಾತ್ರ ಏಕೆ ಕರೆ ಮಾಡಿದ? ಹೀಗಾಗಿ, ಇದು ಸರಳವಾದ ಪ್ರಕರಣವಲ್ಲ ಮತ್ತು ಇದು ಅತ್ಯಂತ ಗಂಭೀರವಾದ ಅಪರಾಧ ಎಂದು ಆರೋಪಿಯನ್ನು 10 ದಿನಗಳ ಕಸ್ಟಡಿಗೆ ತೆಗೆದುಕೊಂಡಿರುವ ಪ್ರಾಸಿಕ್ಯೂಷನ್ ಹೇಳಿದೆ.

'ಆರೋಪಿಯು ಪುನರಾವರ್ತಿತ ಅಪರಾಧಿ ಮತ್ತು ನ್ಯಾಯಾಲಯವು ಈ ಅಂಶವನ್ನು ಪರಿಗಣಿಸಬೇಕು. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯ ಅಗತ್ಯವಿದೆ. ವಿವರವಾದ ತಾಂತ್ರಿಕ ತನಿಖೆಯನ್ನು ಮಾಡಬೇಕಾಗಿದೆ' ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಇದಕ್ಕೆ ಉತ್ತರಿಸಿದ ಆರೋಪಿ ಪರ ವಕೀಲರು, ಆರೋಪಿಯು ಆಸ್ಪತ್ರೆಗೆ ಕರೆ ಮಾಡಿದ್ದಾನೆ ಹೊರತು ನೇರವಾಗಿ ವ್ಯಕ್ತಿಗೆ ಅಲ್ಲ. ಆದರೆ, 'ಕರೆ ನೇರವಾಗಿ ವ್ಯಕ್ತಿಗೆ ಎಂದು ಬಿಂಬಿಸಲಾಗುತ್ತಿದೆ' ಎಂದು ಹೇಳಿದರು.

ಆರೋಪಿಯನ್ನು 'ಮಾನಸಿಕ ಅಸ್ವಸ್ಥ' ಎಂದು ಕರೆದ ಆರೋಪಿ ಪರ ವಕೀಲರು, ಆತ ಮನೋವೈದ್ಯರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ತೋರಿಸಲು ನನ್ನ ಬಳಿ ಪ್ರಮಾಣಪತ್ರವಿದೆ. ಹೀಗೆ ಮಾಡಲು ಆತನಿಗೆ ಯಾವುದೇ ಉದ್ದೇಶವಿಲ್ಲ. ಈ ರೀತಿಯ ಪೂರ್ವಾಪರವನ್ನು ಆತ ಹೊಂದಿಲ್ಲ' ಎಂದು ಹೇಳಿದರು.

ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ಆ.30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com