ಕಸಬ್ ನನ್ನು ಗುರುತು ಹಿಡಿದಾಗ ಆತ ವ್ಯಂಗ್ಯವಾಗಿ ನಕ್ಕಿದ್ದ: ಮುಂಬೈ ದಾಳಿ ವೇಳೆ 20 ಗರ್ಭಿಣಿಯರು, ಶಿಶುಗಳ ರಕ್ಷಿಸಿದ್ದ ನರ್ಸ್ 'ಅಂಜಲಿ ಕುಲ್ತೆ'

26/11 ಮುಂಬೈ ಭಯೋತ್ಪಾದಕ ದಾಳಿ ಸಂತ್ರಸ್ಛೆ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಅಂಜಲಿ ವಿಜಯ್ ಕುಲ್ತೆ ಅವರು ದಾಳಿ ಸಂದರ್ಭದ ಕರಾಳ ಅನುಭವವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಹಂಚಿಕೊಂಡಿದ್ದು, ಕಸಬ್ ನನ್ನು ಗುರುತು ಹಿಡಿದಾಗ ಆತ ವ್ಯಂಗ್ಯವಾಗಿ ನಕ್ಕಿದ್ದ ಎಂದು ಹೇಳಿದ್ದಾರೆ.
ಮುಂಬೈ ದಾಳಿ ಸಂತ್ರಸ್ತೆ ಅಂಜಲಿ ಕುಲ್ತೆ
ಮುಂಬೈ ದಾಳಿ ಸಂತ್ರಸ್ತೆ ಅಂಜಲಿ ಕುಲ್ತೆ

ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿ ಸಂತ್ರಸ್ಛೆ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಅಂಜಲಿ ವಿಜಯ್ ಕುಲ್ತೆ ಅವರು ದಾಳಿ ಸಂದರ್ಭದ ಕರಾಳ ಅನುಭವವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಹಂಚಿಕೊಂಡಿದ್ದು, ಕಸಬ್ ನನ್ನು ಗುರುತು ಹಿಡಿದಾಗ ಆತ ವ್ಯಂಗ್ಯವಾಗಿ ನಕ್ಕಿದ್ದ ಎಂದು ಹೇಳಿದ್ದಾರೆ.

'ಭಯೋತ್ಪಾದನಾ ಕೃತ್ಯಗಳಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು: ಜಾಗತಿಕ ಭಯೋತ್ಪಾದನೆ ನಿಗ್ರಹ ವಿಧಾನ - ತತ್ವಗಳು ಮತ್ತು ಮಾರ್ಗಗಳು' ಎಂಬ ವಿಷಯದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅಂಜಲಿ ಕುಲ್ತೆ ಅವರು, '26/11ರ ಭಯೋತ್ಪಾದಕ ದಾಳಿಯಿಂದ ಮುಂಬೈ ಬದುಕುಳಿದಿರುವುದು ನನ್ನ ಅದೃಷ್ಟ ಎಂದ ಅವರು, ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳು ಅನುಭವಿಸಿದ ಆಘಾತ ಮತ್ತು ದುಃಖವನ್ನು ನಾನು UNSC ಗಮನಕ್ಕೆ ತರಲು ಬಯಸುತ್ತೇನೆ. ಆ ರಾತ್ರಿ 20 ಗರ್ಭಿಣಿಯರು ನನ್ನ ಆರೈಕೆಯಲ್ಲಿದ್ದರು ಎಂದು ಹೇಳಿದರು.

'ನಾವು ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರಲು ತಿಳಿಸಿದ್ದೇವೆ. ಇಬ್ಬರು ವ್ಯಕ್ತಿಗಳು ಆಸ್ಪತ್ರೆಗೆ ಪ್ರವೇಶಿಸಿದರು, ಅವರಲ್ಲಿ ಒಬ್ಬರು ಮನಸೋ ಇಚ್ಛೆ ಗುಂಡು ಹಾರಿಸಿದರು. ಭಯೋತ್ಪಾದಕರು ಆಸ್ಪತ್ರೆಗೆ ಪ್ರವೇಶಿಸಿದ್ದಾರೆ ಎಂದು ನಾನು ಸಿಎಂಒಗೆ ತಿಳಿಸಿದೆ. ಅವರು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಗೆ ಗುಂಡು ಹಾರಿಸುವುದನ್ನು ನಾನು ನೋಡಿದೆ; ನಾನು ಭಯಗೊಂಡಿದ್ದೆ. ನನ್ನ ಸಮವಸ್ತ್ರ ನನಗೆ ಧೈರ್ಯವನ್ನು ನೀಡಿತು. ಶುಶ್ರೂಷೆಯ ಬಗ್ಗೆ ನನ್ನ ಉತ್ಸಾಹವು ನನಗೆ ಆಲೋಚನೆಯ ಸ್ಪಷ್ಟತೆಯನ್ನು ನೀಡಿತು. ರೋಗಿಯನ್ನು ಲೇಬರ್ ವಾರ್ಡ್‌ಗೆ ಸ್ಥಳಾಂತರಿಸುವಾಗ, ನಾವು ಭಾರೀ ಗುಂಡಿನ ಸದ್ದು ಮತ್ತು ಗ್ರೆನೇಡ್ ಸ್ಫೋಟಗಳನ್ನು ಕೇಳಿದ್ದೇವೆ. ರಾತ್ರಿಯಿಡೀ ಕತ್ತಲೆಯಲ್ಲಿ ಕಳೆದೆವು. ಆ ದಾಳಿಯಲ್ಲಿ ನಾವು ಬದುಕಿ ಬರುತ್ತೇವೆ ಎಂದು ನಂಬುವುದು ಕಷ್ಟವಾಗಿತ್ತು ಎಂದು ಹೇಳಿದರು.

ಕಸಬ್ ನನ್ನು ಗುರುತಿಸಿದ್ದ ಅಂಜಲಿ
ಘಟನೆಯ ಒಂದು ತಿಂಗಳ ನಂತರ, ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನನ್ನು ಗುರುತಿಸಲು ನನ್ನನ್ನು ಕರೆಯಲಾಯಿತು. ನನ್ನ ಕುಟುಂಬದವರು ಭಯಭೀತರಾಗಿದ್ದರೂ, ನಾನು ಸಾಕ್ಷಿಯಾಗಲು ಸಿದ್ದಳಾದೆ. ನಾನು ಕಸಬ್‌ನನ್ನು (26/11 ಮುಂಬೈ ದಾಳಿಯ ಆರೋಪಿ) ಗುರುತಿಸಿದಾಗ, ಅವನು ನನ್ನತ್ತ ನೋಡಿ ವ್ಯಂಗ್ಯವಾಗಿ ನಕ್ಕಿದ್ದ.. ನಾನು ಅವನನ್ನು ಸರಿಯಾಗಿ ಗುರುತಿಸಿದ್ದೇನೆ ಎಂದು ಹೇಳಿದನು. ಕಸಬ್‌ನ ಮನಸ್ಸಿನಲ್ಲಿ ಪಾಪಪ್ರಜ್ಞೆಯಾಗಲೀ ಪಶ್ಚಾತ್ತಾಪವಾಗಲೀ ಏನೂ ಇರಲಿಲ್ಲ, ಅವನ ಗೆಲುವಿನ ಭಾವ ನೆನೆದರೆ ಈಗಲೂ ನನ್ನ ಮೈ ಇನ್ನೂ ಜುಮ್ಮೆನ್ನಿಸುತ್ತದೆ. 26/11 ಮುಂಬೈ ದಾಳಿಯ ಸಂತ್ರಸ್ತರಾದ ನಾವು 14 ವರ್ಷಗಳ ನಂತರವೂ ದಾಳಿಯ ರೂವಾರಿಗಳು ಹೊರಗಡೆ ಇದ್ದು, ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದರು.

26/11ರ ಅಪರಾಧಿಗಳಿಗೆ ಶಿಕ್ಷೆಯಾಗಬೇಕು
ಈ ಘಟನೆಯ ನಂತರ ನನಗೆ ಹಲವು ರಾತ್ರಿಗಳು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಅಂಜಲಿ ಕುಲ್ತೆ, ದಾಳಿಯ ರಾತ್ರಿಯನ್ನು ನೆನಪಿಸಿಕೊಂಡಾಗ ನಾನು ಇನ್ನೂ ನಡುಗುತ್ತೇನೆ. ಭಯೋತ್ಪಾದಕರು ಕೀಟಗಳಂತೆ ಮನುಷ್ಯರನ್ನು ಕೊಲ್ಲುತ್ತಿರುವಾಗ, ನಾನು 20 ಗರ್ಭಿಣಿಯರು ಮತ್ತು ಅವರ ಶಿಶುಗಳ ಜೀವವನ್ನು ಉಳಿಸಲು ಸಾಧ್ಯವಾಯಿತು ಎಂಬುದು ನನಗೆ ಸಂತಸದ ವಿಚಾರ. ದಾಳಿಯಲ್ಲಿ ಅನೇಕ ಜೀವಗಳು ಬಲಿಯಾದವು, ಅನೇಕ ಮಕ್ಕಳು ಅನಾಥರಾದರು, ಅನೇಕ ಜನರು ಆಘಾತಕ್ಕೊಳಗಾದರು. ದಾಳಿಯ ಪ್ರಾಯೋಜಕರನ್ನು ನ್ಯಾಯಾಲಯಕ್ಕೆ ತರಲು ಮತ್ತು ಬಲಿಪಶುಗಳ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ನಾನು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com