ಶ್ರೀನಗರ: ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ಆರಂಭವಾಗಿದೆ. ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭದ್ರತಾ ಪಡೆಗಳು ಉಗ್ರರನ್ನು ಸುತ್ತುವರೆದಿದ್ದು, ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ. ಭದ್ರತಾ ಪಡೆಗಳು ಜಾಗರೂಕತೆಯಿಂದ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿವೆ ಎಂದು ತಿಳಿದುಬಂದಿದೆ.
ಸೋಮವಾರ ಮುಂಜಾನೆ, ಪೊಲೀಸರು ಮತ್ತು ಭಾರತೀಯ ಸೇನೆಯು ಭಾನುವಾರ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಉಪವಿಭಾಗ ಮೆಂಧಾರ್ನಿಂದ ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ವೇಳೆ ಆತನ ಬಳಿಯಿದ್ದ ಪಿಸ್ತೂಲ್ ಹಾಗೂ ಕೆಲವು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬಂಧನಕ್ಕೊಳಗಾದ ಉಗ್ರ ಸಾಲ್ವಾ ನಿವಾಸಿಯಾಗಿದ್ದು, ಅರಣ್ಯ ಪ್ರದೇಶದಿಂದ ಬರುತ್ತಿದ್ದಾಗ ಭದ್ರತಾ ಪಡೆಗಳು ತಡೆದಿದ್ದಾರೆ. ಈ ವೇಳೆ ಆತನನ್ನು ವಿಚಾರಿಸಿದಾಗ ಆತ ತಯಾಬ್ ಖಾನ್ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 25 ರಂದು ಶೋಪಿಯಾನ್ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಶೋಪಿಯಾನ್ನ ಹೀರ್ಪೋರಾ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.
ದಕ್ಷಿಣ ಕಾಶ್ಮೀರದ ಶೋಪಿಯಾನ್ನ ಬುರಿಹಾಲನ್ ಹೀರ್ಪೋರಾ ಪ್ರದೇಶದ ನಿವಾಸಿ ವಸೀಮ್ ಅಹ್ಮದ್ ವಾನಿ ಎಂಬ ನಾಗರಿಕನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Advertisement
Advertisement