ಕ್ರಿಮಿನಲ್‌ಗಳು, ಅಪರಾಧಿಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ: ಸಂಸತ್, ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚನೆ

ಕ್ರಿಮಿನಲ್‌ಗಳು, ಅಪರಾಧಿಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ ಎಂದು ಸಂಸತ್ ಮತ್ತು ಚುನಾವಣಾ ಆಯೋಗಕ್ಕೆ ಅಲಹಾಬಾದ್ ನ್ಯಾಯಾಲಯ ಸೂಚನೆ ನೀಡಿದೆ.
ಅಲಹಾಬಾದ್ ಕೋರ್ಟ್
ಅಲಹಾಬಾದ್ ಕೋರ್ಟ್

ಅಲಹಾಬಾದ್: ಕ್ರಿಮಿನಲ್‌ಗಳು, ಅಪರಾಧಿಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ ಎಂದು ಸಂಸತ್ ಮತ್ತು ಚುನಾವಣಾ ಆಯೋಗಕ್ಕೆ ಅಲಹಾಬಾದ್ ನ್ಯಾಯಾಲಯ ಸೂಚನೆ ನೀಡಿದೆ.

23 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಬಿಎಸ್‌ಪಿ ಸಂಸದ ಅತುಲ್ ಕುಮಾರ್ ಸಿಂಗ್ (ಅತುಲ್ ರಾಯ್) ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅಲಹಾಬಾದ್ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ನೇತೃತ್ವದ ಪೀಠ ಕ್ರಿಮಿನಲ್‌ಗಳು, ಅಪರಾಧಿಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಪ್ರಜಾಪ್ರಭುತ್ವವನ್ನು ಉಳಿಸಲು, ಪ್ರಜಾಪ್ರಭುತ್ವದ ತತ್ವ ಮತ್ತು ಕಾನೂನಿನ ಆಧಾರದ ಮೇಲೆ ದೇಶ ನಡೆಯುವಂತೆ ಮಾಡಬೇಕಿದ್ದರೆ ಅಪರಾಧಿಗಳು ರಾಜಕೀಯ ಅಥವಾ ಶಾಸಕಾಂಗ ಪ್ರವೇಶಿಸುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾದದ್ದು ಸಂಸತ್ತಿನ ಜವಾಬ್ದಾರಿಯಾಗಿದೆ. 2004ರಲ್ಲಿ ಲೋಕಸಭಾದ ಶೇ 24ರಷ್ಟು ಸಂಸದರು ಕ್ರಿಮಿನಲ್ ಮೊಕದ್ದಮೆಗಳನ್ನು ಬಾಕಿ ಉಳಿಸಿಕೊಂಡಿದ್ದರು. ಇದು 2009ರಲ್ಲಿ ಶೇ 30 ಕ್ಕೆ ಏರಿತು. 2014 ರಲ್ಲಿ ಇದು ಶೇ 34ಕ್ಕು, 2019ರಲ್ಲಿ ಶೇ 43ಕ್ಕೂ ಏರಿಕೆಯಾಗಿದೆ. ರಾಜಕೀಯದ ಅಪರಾಧೀಕರಣ ಮತ್ತು ಚುನಾವಣಾ ಸುಧಾರಣೆಗಳ ಅಗತ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ, ಭಾರತೀಯ ಪ್ರಜಾಪ್ರಭುತ್ವವನ್ನು ಅಪರಾಧಿಗಳು, ಕೊಲೆಗಡುಕರಿಂದ ರಕ್ಷಿಸಲು ಸಂಸತ್ತು ಮತ್ತು ಚುನಾವಣಾ ಆಯೋಗವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ. ಸಂಘಟಿತ ಅಪರಾಧ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ನಡುವೆ ಅಪವಿತ್ರ ಮೈತ್ರಿ ಇದೆ. ಈ ವಿದ್ಯಮಾನಗಳು ಕಾನೂನು ಜಾರಿ ಸಂಸ್ಥೆಗಳ, ಸರ್ಕಾರದ ವಿಶ್ವಾಸಾರ್ಹತೆ, ಪರಿಣಾಮಕಾರಿತ್ವ ಮತ್ತು ನಿಷ್ಪಕ್ಷಪಾತ ತತ್ವವನ್ನು ಕುಗ್ಗಿಸಿದೆ. ಎಂದು ನ್ಯಾಯಾಲಯ ಹೇಳಿತು.

ಇನ್ನು ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಕಿಡಿಕಾರಿದ ನ್ಯಾಯಪೀಠ, 'ರಾಯ್‌ ಅವರಿಗೆ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ವಿರುದ್ಧದ 23 ಪ್ರಕರಣಗಳ ಕ್ರಿಮಿನಲ್ ಇತಿಹಾಸ, ಅವರ ಸಂಭಾವ್ಯತೆ, ಅವರ ವಿರುದ್ಧದ ಸಾಕ್ಷ್ಯಗಳು ಮತ್ತು ಸಾಕ್ಷ್ಯವನ್ನು ತಿರುಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ ಈ ನಿರ್ಧಾರಕ್ಕೆ ಬಂದಿದೆ. 

‘ವರ್ತಮಾನದ ರಾಜಕೀಯವು ಅಪರಾಧ, ಹಣಬಲ, ತೋಳ್ಬಲದ ಜಾಲದಲ್ಲಿ ಸಿಲುಕಿದೆ ಎಂಬುದು ನಿರ್ವಿವಾದ. ಅಪರಾಧ ಮತ್ತು ರಾಜಕೀಯದ ನಡುವಿನ ನಂಟು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನು, ಆಡಳಿತಕ್ಕೆ ಎದುರಾಗಿರುವ ಗಂಭೀರ ಅಪಾಯ. ಸಂಸತ್ತು, ವಿಧಾನಸಭೆ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳಿಗೆ ಸ್ಪರ್ಧಿಸುವುದು ಇಂದು ದುಬಾರಿ ಎನಿಸಿದೆ. ರಾಯ್ ಅವರಂತಹ ಆರೋಪಿಗಳು ತಮ್ಮ ಹಣಬಲ, ತೋಳ್ಬಲ ಮತ್ತು ರಾಜಕೀಯ ಶಕ್ತಿ ಬಳಸಿಕೊಂಡು ಸಾಕ್ಷಿಗಳನ್ನು ಮಣಿಸಿದ್ದಾರೆ. ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಸಾಕ್ಷ್ಯವನ್ನು ತಿರುಚಿದ್ದಾರೆ. ಇದು ದೇಶದ ಆಡಳಿತ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸದ ಕೊರತೆಗೆ ಕಾರಣವಾಗಿದೆ. ಅಪರಾಧ ಹಿನ್ನೆಲೆಯ ಮಂದಿ ಅಪಾಯಕಾರಿ ಪ್ರಮಾಣದಲ್ಲಿ ಸಂಸತ್ತು ಮತ್ತು ವಿಧಾನಸಭೆಯನ್ನು ಪ್ರವೇಶಿಸುತ್ತಿರುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಹೊರಗೆ ಬಾಲಕಿ ಮತ್ತು ಸಾಕ್ಷಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಯ್‌ ವಿರುದ್ಧ ಲಖನೌನ ಹಜರತ್‌ಗಂಜ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com