ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಆದೇಶ ಹಿಂಪಡೆಯುವಿಕೆ ಪರಿಗಣನೆ: ವೆಂಕಯ್ಯ ನಾಯ್ಡು

ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 19 ಸದಸ್ಯರ ಅಮಾನತು ಮಾಡಿರುವ ಬೆನ್ನಲ್ಲೇ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಅಮಾನತುಗೊಂಡಿರುವ ಎಲ್ಲ ಸದಸ್ಯರು ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಹಿಂತೆಗೆದುಕೊಳ್ಳುವಿಕೆಯನ್ನು ಪರಿಗಣಿಸಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಎಂ. ವೆಂಕಯ್ಯ ನಾಯ್ಡು
ಎಂ. ವೆಂಕಯ್ಯ ನಾಯ್ಡು
Updated on

ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 19 ಸದಸ್ಯರ ಅಮಾನತು ಮಾಡಿರುವ ಬೆನ್ನಲ್ಲೇ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಅಮಾನತುಗೊಂಡಿರುವ ಎಲ್ಲ ಸದಸ್ಯರು 'ತಮ್ಮ ದುರ್ನಡತೆಯ  ಗಂಭೀರತೆಯನ್ನು ಅರಿತು' ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಹಿಂತೆಗೆದುಕೊಳ್ಳುವಿಕೆಯನ್ನು ಪರಿಗಣಿಸಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇದೇ ವೇಳೆ, ವಿಪಕ್ಷಗಳು ಒತ್ತಾಯಿಸುತ್ತಿರುವಂತೆ ಮುಂದಿನ ವಾರದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ವಿಷಯ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಸಹ ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸಭಾಪತಿ ನಾಯ್ಡು ಅವರು ವಿರೋಧ ಪಕ್ಷದ ನಾಯಕರು ಮತ್ತು ಸಂಬಂಧಪಟ್ಟ ಇತರ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

'ಸದನದ ಪ್ರತಿಷ್ಠೆ ಮತ್ತು ಘನತೆಯನ್ನು ಎತ್ತಿಹಿಡಿಯಲು' ಅಮಾನತು ಮಾಡುವಂತಹ ಕ್ರಮಗಳನ್ನು ಕೊನೆಯ ಹಂತದಲ್ಲಿ ತೆಗೆದುಕೊಳ್ಳಲಾಗುವುದು. ತಪ್ಪಿತಸ್ಥ ಸದಸ್ಯರ ಬಗ್ಗೆ ಮಾತನಾಡುವ ಮುನ್ನ 'ಸಭಾಪತಿ ಅನುಭವಿಸುವ ನೋವ'ನ್ನು ವಿರೋಧ ಪಕ್ಷಗಳ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ನಿನ್ನೆ ರಾಜ್ಯಸಭೆಯಿಂದ ಅಮಾನತುಗೊಂಡ 19 ಸದಸ್ಯರ ಬೇಡಿಕೆಯ ವಿಚಾರದ ಕುರಿತು ಇಂದು ಪ್ರತಿಪಕ್ಷದ 10 ನಾಯಕರು ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದರು. ಅಮಾನತುಗೊಂಡ ಸದಸ್ಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಸದನಕ್ಕೆ ಉತ್ತಮ ಹಾಜರಾತಿ ಇರುವಂತೆ ನೋಡಿಕೊಳ್ಳಲು ಅವರೆಲ್ಲರ ಅಮಾನತು ಹಿಂಪಡೆಯಬಹುದು ಎಂದು ಸಲಹೆ ನೀಡಿದರು. ಬೆಲೆ ಏರಿಕೆ ಕುರಿತು ಚರ್ಚಿಸಲು ನಿರ್ದಿಷ್ಟ ದಿನಾಂಕವನ್ನು ಸೂಚಿಸುವಂತೆಯೂ ಆಗ್ರಹಿಸಿದ್ದಾರೆ. ಅಲ್ಲದೆ, ಬೇಷರತ್ ಅಮಾನತು ಹಿಂಪಡೆಯುವುದು ಸೂಕ್ತ ಎಂದು ಕೂಡ ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಭಾ ನಾಯಕ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮುರಳೀಧರನ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಸದನದ ಕಲಾಪಗಳಿಗೆ ಅಡ್ಡಿಪಡಿಸದಂತೆ ಆಯಾ ಪಕ್ಷದ ಸದಸ್ಯರಿಗೆ ಸಲಹೆ ನೀಡುವಂತೆ ವೆಂಕಯ್ಯ ನಾಯ್ಡು ಅವರು ಪ್ರತಿಪಕ್ಷಗಳ ನಾಯಕರನ್ನು ಒತ್ತಾಯಿಸಿದರು. 19 ಸದಸ್ಯರು ಸದನದ ಬಾವಿಗೆ ನುಗ್ಗಿ, ಘೋಷಣೆಗಳನ್ನು ಕೂಗಿ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಗಂಭೀರ ಕಳವಳಕಾರಿ ಸಂಗತಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.

ಸದನದ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ 1989 ರಲ್ಲಿ ಲೋಕಸಭೆಯ 63 ಸದಸ್ಯರನ್ನು ಮತ್ತು 2015 ರಲ್ಲಿ ಇತರೆ 25 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು ಎಂದು ಅವರು ಗಮನಸೆಳೆದರು.

ಇದರೊಂದಿಗೆ ವೆಂಕಯ್ಯ ನಾಯ್ಡು ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಸಭೆ ನಡೆಸಿದರು. ಅವರ ಆರೋಗ್ಯ ಮತ್ತು ಬೆಲೆ ಏರಿಕೆ ವಿಚಾರದ ಚರ್ಚೆಗೆ ಉತ್ತರಿಸಲು ಸಿದ್ಧರಿದ್ದಾರೆಯೇ ಎಂಬುದನ್ನು ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com