ಕೂಡ್ಲಿಗಿ: ಕೂಡ್ಲಿಗಿಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಸರ್ಕಾರಿ ಬಸ್ ಮತ್ತು ಆಟೋ ನಡುವೆ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಆಟೋ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಆರು ಜನರಿಗೆ ಗಾಯಗಳಾಗಿದ್ದು ಅದರಲ್ಲಿ ತೀವ್ರಗಾಯವಾಗಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರು ಕಾಲೇಜು ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದೆ. ಉಳಿದ ನಾಲ್ವರು ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ ಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆದಲ್ಲಿ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು ಉಳಿದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಕಳುಹಿಸಲಾಗಿದೆ.
ಇಂದು ಮಧ್ಯಾಹ್ನ 2-45 ಗಂಟೆ ಸುಮಾರಿಗೆ ಕೂಡ್ಲಿಗಿ ಕುಪ್ಪಿನಕೆರೆ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದ್ದು, ದಾವಣಗೆರೆಯಿಂದ ಕೂಡ್ಲಿಗಿ ಮಾರ್ಗವಾಗಿ ಬಳ್ಳಾರಿ ಕಡೆ ಹೊರಟಿದ್ದ ಬಳ್ಳಾರಿ ಎರಡನೇ ಘಟಕದ ಬಸ್ಸಿನ ಟೈರ್ ಬರ್ಸ್ಟ್ ಆಗುವ ಮೂಲಕ ಎದುರಿಗೆ ಕೂಡ್ಲಿಗಿಯಿಂದ ಈಚಲಬೊಮ್ಮನಹಳ್ಳಿ ಕಡೆ ಹೊರಟಿದ್ದ ಆಟೋಕ್ಕೆ ಕುಪ್ಪಿನಕೆರೆ ಕ್ರಾಸ್ ಮುಂದುಗಡೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಈಚಲಬೊಮ್ಮನಹಳ್ಳಿಯ ಪುಷ್ಪಾಲತಾ (20) ತೀವ್ರಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಉಳಿದಂತೆ ಬೆರಳು ಕತ್ತರಿಸಿ ಅಪಘಾತ ಸ್ಥಳದಲ್ಲಿ ಬಿದ್ದು ಉಳಿದಂತೆ ದೇಹದ ಭಾಗಗಳಿಗೆ ಗಾಯವಾಗಿರುವ ಮೀನಾಕ್ಷಿ (38) ಇವರನ್ನು ಬಳ್ಳಾರಿ ವಿಮ್ಸ್ ಗೆ ಕೂಡ್ಲಿಗಿ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವಾಗ ರಾಂಪುರ ಹತ್ತಿರದ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಉಳಿದಂತೆ ರಮೇಶ (28), ಗೌಡ್ರುಈರಣ್ಣ (65), ಅಭಿಷೇಕ್ (20) ತೀವ್ರಗಾಯಗೊಂಡ ಇವರುಗಳನ್ನು ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಮತ್ತೋರ್ವ ವಿದ್ಯಾರ್ಥಿನಿ ಸ್ವಾತಿ (19) ಇವರು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
Advertisement