ಮುಂಬೈ: ಶಿವಸೇನೆಯಲ್ಲಿನ ಬೃಹತ್ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗುತ್ತದೆ ಎಂಬ ಮಾತುಗಳ ನಡುವೆ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಲಾಗಿದೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಖ್ಯಮಂತ್ರಿ ಸ್ಥಾನದ ಆಮಿಷವೊಡ್ಡಿದರೂ ಕೂಡ ಏಕನಾಥ್ ಶಿಂಧೆ ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ನಿನ್ನೆ ಮುಂಬೈಯಲ್ಲಿ ಸರ್ಕಾರದಲ್ಲಿ ನಡೆದ ನಾಟಕೀಯ ಬೆಳವಣಿಗೆ ನಂತರ ಗೋಡೆಯ ಮೇಲೆ ಬರೆದು ಉದ್ಧವ್ ಠಾಕ್ರೆ ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸ ವರ್ಷವನ್ನು ಕಳೆದ ರಾತ್ರೋರಾತ್ರಿ ಖಾಲಿ ಮಾಡಿದರು. ಬಾಂದ್ರಾದಲ್ಲಿರುವ ಅವರ ಕುಟುಂಬದ ಮಾತೋಶ್ರೀ ಬಂಗಲೆಗೆ ತೆರಳಿದರು. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ವಸತಿ ಸಚಿವ ಜಿತೇಂದ್ರ ಅಹ್ವಾದ್ ಅವರೊಂದಿಗೆ ಉದ್ಧವ್ ಅವರನ್ನು ಭೇಟಿ ಮಾಡಿದರು. ಉದ್ಧವ್ ಪಕ್ಷದ ಅಧ್ಯಕ್ಷರಾಗಿ ಉಳಿದಿರುವಾಗ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಹುದ್ದೆಯು ಶಿವಸೇನೆಯ ಭಾಗವಾಗಿದ್ದು, ಅದು ಹಾಗೆಯೇ ಮುಂದುವರಿದುಕೊಂಡು ಹೋಗಬೇಕೆಂಬುದು ನಾಯಕರ ಲೆಕ್ಕಾಚಾರವಾಗಿತ್ತು.
ಆದರೆ ಶಿವಸೇನೆಯ ಶಾಸಕರಲ್ಲಿ ಅತಿಹೆಚ್ಚಿನ ಸಂಖ್ಯಾಬಲದ ಬಂಡಾಯ ಗುಂಪನ್ನು ಹೊಂದಿರುವ ಶಿಂಧೆ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು, ಪಕ್ಷದ ಹಿತಾಸಕ್ತಿ ತಮಗೆ ಮುಖ್ಯವಾಗಿದ್ದು, ಹಿಂದುತ್ವ ತತ್ವಗಳಲ್ಲಿ ತಾವು ರಾಜಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ, ವೆಬ್ ಕಾಸ್ಟ್ ನಲ್ಲಿ ಸಿಎಂ ಉದ್ಧವ್ ಠಾಕ್ರೆ ಮನವಿಯನ್ನು ಮಾಡಿಕೊಂಡರು. ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಆದರೆ ಸಿಎಂ ಭಾಷಣದ ನಂತರ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಕೊನೆಯ ಕ್ಷಣದವರೆಗೂ ಹೋರಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ನಮ್ಮ ಬಂಡಾಯ ಶಾಸಕರು ತಮ್ಮಲ್ಲೇ ಸಿಎಂ ಆಯ್ಕೆ ಮಾಡಬೇಕು. ಸಿಎಂ ಶಿವಸೇನೆಯವರೇ ಆಗಿರಬೇಕು. ಸೂರತ್ ಮತ್ತು ಗುವಾಹಟಿಯಿಂದ ಏಕೆ ಮಾತನಾಡಬೇಕು, ದಯವಿಟ್ಟು ಮುಂಬೈಗೆ ಬಂದು ನನ್ನೊಂದಿಗೆ ಮಾತನಾಡಿ. ನೀವು ನನ್ನನ್ನು ಭೇಟಿಯಾಗಲು ಬಯಸದಿದ್ದರೆ, ಕನಿಷ್ಠ ಕರೆ ಮಾಡಿ ನಿಮ್ಮ ಆಲೋಚನೆಗಳನ್ನು ತಿಳಿಸಿ ಎಂದು ನಿನ್ನೆ ಉದ್ಧವ್ ಠಾಕ್ರೆ ಪಕ್ಷದ ಬಂಡಾಯ ಶಾಸಕರಿಗೆ ಹೇಳಿದ್ದಾರೆ.
ಹಿಂದುತ್ವದೊಂದಿಗೆ ರಾಜಿ ಮಾಡಿಕೊಳ್ಳುವ ಶಿಂಧೆ ಆರೋಪವನ್ನು ತಳ್ಳಿಹಾಕಿದ ಉದ್ಧವ್, “ಆದಿತ್ಯ ಠಾಕ್ರೆ ಇತ್ತೀಚೆಗೆ ಶಿಂಧೆ ಅವರೊಂದಿಗೆ ಅಯೋಧ್ಯೆಗೆ ಹೋಗಿದ್ದರು. ಹಿಂದುತ್ವವು ಶಿವಸೇನೆಯ ಭಾಗವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದ ಮೊದಲ ಮಹಾರಾಷ್ಟ್ರ ಸಿಎಂ ನಾನೇ ಆಗಿರಬಹುದು. ನಾನು ಸಿಎಂ ಕುರ್ಚಿಗೆ ಅಂಟಿಕೊಳ್ಳುವ ವ್ಯಕ್ತಿ ಅಲ್ಲ. ನಾನು ಈಗಾಗಲೇ ರಾಜೀನಾಮೆ ಪತ್ರವನ್ನು ಬರೆದಿದ್ದೇನೆ ಎಂದರು.
ಉದ್ಧವ್ ಅವರು ಸಿಎಂ ಆಗಬಾರದು ಎಂದು ಅವರವರೇ ಹೇಳುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
Advertisement