ಗುಜರಾತ್‌ ಸೇತುವೆ ಕುಸಿತ: ನ.14 ರಂದು ನ್ಯಾಯಾಂಗ ತನಿಖೆಗಾಗಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆ 'ಸುಪ್ರೀಂ' ಸಮ್ಮತಿ

ಗುಜರಾತ್‌ನ ಮೋರ್ಬಿ ಸೇತುವೆ ಕುಸಿತ ದುರಂತದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನವೆಂಬರ್ 14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಗುಜರಾತ್‌ನ ಮೋರ್ಬಿ ಸೇತುವೆ ಕುಸಿತ ದುರಂತದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನವೆಂಬರ್ 14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಇತ್ತೀಚಿನ ವರದಿಗಳ ಪ್ರಕಾರ, ಭಾನುವಾರ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಯಲ್ಲಿ ನಿರ್ಮಿಸಲಾಗಿದ್ದ ಬ್ರಿಟಿಷ್ ಕಾಲದ ತೂಗು ಸೇತುವೆ ಕುಸಿದು ಮೃತಪಟ್ಟವರ ಸಂಖ್ಯೆ 134ಕ್ಕೆ ಏರಿದೆ.

ವಕೀಲ ವಿಶಾಲ್ ತಿವಾರಿ ಅವರು ತುರ್ತು ವಿಚಾರಣೆಗಾಗಿ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ನೀವು ಬಹಳ ಫಾಸ್ಟ್. ನಿಮ್ಮ ಮನವಿ ಏನು ಎಂದು ಕೇಳಿದೆ.

ಈವೇಳೆ, 'ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆಗೆ ನಾನು ಕೋರುತ್ತಿದ್ದೇನೆ' ಎಂದು ವಕೀಲರು ಹೇಳಿದರು. ನಂತರ ಪೀಠವು ನವೆಂಬರ್ 14 ರಂದು ಪಿಐಎಲ್ ಅನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

ಸೇತುವೆ ಕುಸಿತದಿಂದಾಗಿ 134ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾಗಿದೆ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಕಳೆದ ಒಂದು ದಶಕದಿಂದ, ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ ನಿರ್ವಹಣೆ ಚಟುವಟಿಕೆಗಳಿಂದಾಗಿ ನಮ್ಮ ದೇಶದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಆದರೆ, ಅಪಾರ ಪ್ರಮಾಣದ ಸಾರ್ವಜನಿಕ ಸಾವುನೋವುಗಳನ್ನು ತಪ್ಪಿಸಬಹುದಾಗಿತ್ತು ಎಂದು ಪಿಐಎಲ್‌ನಲ್ಲಿ ತಿವಾರಿ ಹೇಳಿದ್ದಾರೆ.

ರಾಜ್ಯ ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಮೊರ್ಬಿಯ ಮಚ್ಚು ನದಿಯ ಮೇಲೆ ಶತಮಾನಕ್ಕೂ ಹೆಚ್ಚು ಹಳೆಯದಾದ ತೂಗು ಸೇತುವೆಯನ್ನು ವ್ಯಾಪಕ ದುರಸ್ತಿ ಮತ್ತು ನವೀಕರಣದ ನಂತರ ಐದು ದಿನಗಳ ಹಿಂದಷ್ಟೇ ಮತ್ತೆ ತೆರೆಯಲಾಗಿತ್ತು.

ಜನರಿಂದ ಕಿಕ್ಕಿರಿದಿದ್ದ ಸೇತುವೆಯು ಭಾನುವಾರ ಸಂಜೆ 6.30ರ ಸುಮಾರಿಗೆ ಕುಸಿದು ಬಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 134 ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com