ಮಹಾರಾಷ್ಟ್ರ: ಗುರುದ್ವಾರಕ್ಕೆ ರಾಹುಲ್ ಗಾಂಧಿ ಭೇಟಿ, ಭಾರತ್ ಜೋಡೋ ಯಾತ್ರೆ ಪುನರಾರಂಭ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸುವ ಮೊದಲು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗುರುದ್ವಾರಕ್ಕೆ ಭೇಟಿ ನೀಡಿದರು.
'ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
'ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Updated on

ದೆಗ್ಲೂರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸುವ ಮೊದಲು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗುರುದ್ವಾರಕ್ಕೆ ಭೇಟಿ ನೀಡಿದರು.

ತೆಲಂಗಾಣದಿಂದ ಸೋಮವಾರ ರಾತ್ರಿ ಮಹಾರಾಷ್ಟ್ರಕ್ಕೆ ಯಾತ್ರೆ ಪ್ರವೇಶಿಸಿದ ಕೆಲವೇ ಗಂಟೆಗಳ ನಂತರ ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಗುರುದ್ವಾರ ಯಾದ್ಗಾರಿ ಬಾಬಾ ಜೋರವರ್ ಸಿಂಗ್ ಜಿ ಫತೇ ಸಿಂಗ್ ಜಿಗೆ ಭೇಟಿ ನೀಡಿದರು.

ಗುರುದ್ವಾರದಲ್ಲಿ, ರಾಹುಲ್ ಗಾಂಧಿ ಅವರು ಸಾಮರಸ್ಯ ಮತ್ತು ಸಮಾನತೆಗಾಗಿ ಪ್ರಾರ್ಥಿಸಿದರು ಎಂದು ಪಕ್ಷವು ಟ್ವೀಟ್ ಮಾಡಿದೆ.

ಮಂಗಳವಾರ ಬೆಳಗ್ಗೆ ಗುರುದ್ವಾರದಿಂದ ನಾಂದೇಡ್‌ನ ಬಿಲೋಲಿ ಜಿಲ್ಲೆಯ ಅಟ್ಕಲಿಗೆ ಯಾತ್ರೆಯು ಸಾಗಲಿದೆ.

ಬಿಲೋಲಿಯ ಗೋದಾವರಿ ಮನಾರ್ ಶುಗರ್ ಫ್ಯಾಕ್ಟರಿ ಮೈದಾನದಲ್ಲಿ ರಾತ್ರಿ ರಾಹುಲ್ ಗಾಂಧಿ ಅವರು ತಂಗಲು ನಿರ್ಧರಿಸಲಾಗಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಸಮರ್ಪಕ ಅನುಷ್ಠಾನದಂತಹ ಕೇಂದ್ರದ ತಪ್ಪು ನೀತಿಗಳಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಸೋಮವಾರ ರಾತ್ರಿ 'ಜ್ವಲಂತ ಜ್ಯೋತಿ' (ಮಶಾಲ್) ಹಿಡಿದು ಮಹಾರಾಷ್ಟ್ರಕ್ಕೆ ಪ್ರವೇಶಿಸಿದಾಗ ರಾಹುಲ್ ಗಾಂಧಿ ಹೇಳಿದರು.

ಮುಂದಿನ 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ವಾಸ್ತವ್ಯದ ವೇಳೆ ರಾಜ್ಯದ ಜನರ ಧ್ವನಿ ಮತ್ತು ಅವರ ನೋವುಗಳನ್ನು ಆಲಿಸುವುದಾಗಿ ಹೇಳಿದರು. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿ (ತಮಿಳುನಾಡು) ಯಿಂದ ಆರಂಭವಾದ ತಮ್ಮ 61 ದಿನಗಳ ಯಾತ್ರೆಯು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ. ಈ ಯಾತ್ರೆಯನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಸಂಸದರ ನೇತೃತ್ವದ 3,570 ಕಿಮೀ ಉದ್ದದ ಯಾತ್ರೆಯು ನೆರೆಯ ತೆಲಂಗಾಣದಿಂದ ಮಧ್ಯ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೆಗ್ಲೂರ್ ತಲುಪಿತು.

ಎರಡು ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಮೆರವಣಿಗೆ ಆರಂಭಗೊಂಡಿದ್ದು, ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಶ್ರೀನಗರದಲ್ಲಿ ಯಾತ್ರೆಯು ಕೊನೆಗೊಳ್ಳಲಿದೆ. ದೇಶವನ್ನು ಒಂದುಗೂಡಿಸುವುದು ಯಾತ್ರೆಯ ಗುರಿಯಾಗಿದೆ ಎಂದು ಅವರು ಹೇಳಿದರು.

ಭಾರತದ ವಾಸ್ತವ ಏನೆಂದರೆ, ದೇಶವು ತನ್ನ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನಿರುದ್ಯೋಗ, ಇನ್ನೊಂದು ಕಡೆ ಹಣದುಬ್ಬರವಿದೆ. ಹರಡುತ್ತಿರುವ ದ್ವೇಷ, ಕೋಪ ಮತ್ತು ಹಿಂಸಾಚಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಯಾತ್ರೆಯ ಪ್ರಮುಖ ಗುರಿಯಾಗಿದೆ ಎಂದು ರಾಹುಲ್ ತಿಳಿಸಿದರು.

ರಾಹುಲ್ ಗಾಂಧಿಯವರು ಮಹಾರಾಷ್ಟ್ರದ ತಮ್ಮ ಯಾತ್ರೆಯಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲನೆಯದು ನವೆಂಬರ್ 10 ರಂದು ನಾಂದೇಡ್ ಜಿಲ್ಲೆಯಲ್ಲಿ ಮತ್ತು ನವೆಂಬರ್ 18 ರಂದು ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಮಾತನಾಡಲಿದ್ದಾರೆ.

ಇದು ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸುವ ಮೊದಲು ಐದು ಜಿಲ್ಲೆಗಳಲ್ಲಿ 382 ಕಿಮೀ ದೂರವನ್ನು ಕ್ರಮಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com