ಶಿಮ್ಲಾ: ಹಿಮಾಚಲ ಪ್ರದೇಶ ಚುನಾವಣೆಗೆ ಮತದಾನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ, ರಾಜ್ಯವು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲು ಮತ್ತು ಉದ್ಯೋಗವನ್ನು ಪಡೆಯಲು ಮತ ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ 55 ಲಕ್ಷಕ್ಕೂ ಹೆಚ್ಚು ಮತದಾರರು 68 ವಿಧಾನಸಭಾ ಕ್ಷೇತ್ರಗಳಲ್ಲಿ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
'ಹಿಮಾಚಲ ಪ್ರದೇಶವು ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಗೆ ಮತ ಹಾಕುತ್ತದೆ, ಹಿಮಾಚಲ ಪ್ರೇದೇಶವು ಉದ್ಯೋಗಕ್ಕಾಗಿ ಮತ ಚಲಾಯಿಸುತ್ತದೆ ಮತ್ತು ಹಿಮಾಚಲ ಪ್ರದೇಶವು ‘ಹರ್ ಘರ್ ಲಕ್ಷ್ಮಿ’ಗೆ ಮತ ಹಾಕುತ್ತದೆ' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಹಿಮಾಚಲದ ಪ್ರಗತಿ ಮತ್ತು ಸಮೃದ್ಧ ಭವಿಷ್ಯಕ್ಕೆ ನಿಮ್ಮ ಅಮೂಲ್ಯ ಕೊಡುಗೆ ನೀಡಿ' ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ರಾಜ್ಯದ ಮತದಾರರಲ್ಲಿ ಮನವಿ ಮಾಡಿದರು.
ರಾಹುಲ್ ಗಾಂಧಿಯವರು ಮಹಾರಾಷ್ಟ್ರದಲ್ಲಿ ಪಕ್ಷದ 'ಭಾರತ್ ಜೋಡೋ ಯಾತ್ರೆ' ಕೈಗೊಳ್ಳುತ್ತಿದ್ದಾರೆ.
ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ, 300 ಯೂನಿಟ್ ಉಚಿತ ವಿದ್ಯುತ್, 680-ಕೋಟಿ ರೂ. ಸ್ಟಾರ್ಟ್ಅಪ್ ನಿಧಿ, ಒಂದು ಲಕ್ಷ ಉದ್ಯೋಗಗಳು ಮತ್ತು 18 ರಿಂದ 60 ವರ್ಷಗಳ ನಡುವಿನ ಮಹಿಳೆಯರಿಗೆ ತಿಂಗಳಿಗೆ 1,500 ರೂ ನೀಡುವುದು ಹಿಮಾಚಲ ಪ್ರದೇಶಕ್ಕೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಸೇರಿವೆ.
ಗುಡ್ಡಗಾಡು ರಾಜ್ಯದಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ ನಿಧಾನಗತಿಯಲ್ಲಿ ಸಾಗಿತು. ಸಮಯ ಕಳೆದಂತೆ ಚಳಿಯ ಅಬ್ಬರ ಸ್ವಲ್ಪ ಕಡಿಮೆಯಾಯಿತು.
ಎಲ್ಲಾ 68 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
Advertisement