ಕೋಲ್ಕತ್ತಾ: ಮುರ್ಷಿದಾಬಾದ್ ಜಿಲ್ಲೆಯಲ್ಲಿ ಟಿಎಂಸಿ ಸಂಸದರೊಬ್ಬರ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಸಂಸದ ಅಬು ತಾಹೆರ್ ಖಾನ್ ಅವರು ಬೆಹ್ರಾಂಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಆದರೆ ಬಾಲಕ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮೃತಪಟ್ಟ ಬಾಲಕನನ್ನು ಹಾಸಿಂ ಸರ್ಕಾರ್ ಎಂದು ಗುರುತಿಸಲಾಗಿದೆ.
"ಮಗು ಇದ್ದಕ್ಕಿದ್ದಂತೆ ನನ್ನ ಕಾರಿನ ಮುಂದೆ ಬಂದಿತು. ನನ್ನ ಮುಂದೆ ಈ ದುರ್ಘಟನೆ ಸಂಭವಿಸಿದೆ. ನಾನು ಅತನನ್ನು ಆಸ್ಪತ್ರೆಗೆ ಸೇರಿಸಿದೆ. ಬಾಲಕನ ಮೆದುಳಿಗೆ ಗಂಭೀರ ಗಾಯವಾಗಿರಬಹುದು" ಎಂದು ಮುರ್ಷಿದಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಖಾನ್ ಹೇಳಿದ್ದಾರೆ.
ಪೋಲೀಸರ ಪ್ರಕಾರ, ಈ ಘಟನೆಯು ನವೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರೇಖಾಲಿಯಲ್ಲಿ ನಡೆದಿದೆ.
“ಮಗುವಿನ ತಾಯಿ ಸ್ವಸಹಾಯ ಸಂಘದ ಕಾರ್ಯಕರ್ತೆ, ಸ್ಥಳೀಯ ಬ್ಯಾಂಕ್ಗೆ ಹಣ ಠೇವಣಿ ಮಾಡಲು ಹೋಗಿದ್ದರು. ಮಗು ತನ್ನ ತಾಯಿಯೊಂದಿಗೆ ಹೋಗಿತ್ತು. ತಾಯಿ ಹಣ ಜಮೆ ಮಾಡುವಲ್ಲಿ ನಿರತರಾಗಿದ್ದಾಗ ಬಾಲಕ ಹೊರಗೆ ಬಂದನು. ಮಗು ರಸ್ತೆ ಮಧ್ಯಕ್ಕೆ ಬಂದಿತು. ಈ ವೇಳೆ ವೇಗವಾಗಿ ಬಂದ ಸಂಸದರ ಕಾರು ಡಿಕ್ಕಿ ಹೊಡೆದಿದೆ ” ಎಂದು ನೌಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement