ಕೊಚ್ಚಿ: ವಿಮಾನ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದ ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಅವರನ್ನು ತಡೆದ ಹಾಗೂ ನಿಂದಿಸಿದ ಆರೋಪದ ಮೇಲೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಇಡುಕ್ಕಿ ಜಿಲ್ಲೆಯವರಾದ ಮತ್ತು ಕಂಟೈನರ್ ಲಾರಿಯೊಂದರ ಚಾಲಕರಾದ ಟಿಜೋ ಅವರು ಭಾನುವಾರ ತಡರಾತ್ರಿ ಮದ್ಯದ ಅಮಲಿನಲ್ಲಿ ಮುಖ್ಯ ನ್ಯಾಯಾಧೀಶರ ಕಾರನ್ನು ತಡೆದಿದ್ದರು. ಈ ವೇಳೆ ಕಿರುಚಾಡುತ್ತಿದ್ದ ಅವರು ಮಣಿಕುಮಾರ್ ಅವರಿಗೆ ಇದು ತಮಿಳುನಾಡು ಅಲ್ಲ, ಕೇರಳ ಎಂದು ಹೇಳಿದ್ದಾರೆ.
ಕೂಡಲೇ ಮುಖ್ಯ ನ್ಯಾಯಾಧೀಶರ ವೈಯಕ್ತಿಕ ಭದ್ರತಾ ಪೊಲೀಸರು ಟಿಜೋನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಟಿಜೋ ಯಾವ ಕಾರಣಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳನ್ನು ನಿಂದಿಸಿದ ಎನ್ನುವ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಪೊಲೀಸರು ಆತನ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಆ ವ್ಯಕ್ತಿ ತನ್ನ ಕುಟುಂಬದೊಂದಿಗೆ ಕೊಚ್ಚಿಯಲ್ಲಿ ವಾಸಿಸುತ್ತಿದ್ದು, ಈ ಹಿಂದೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಹೀಗಿದ್ದರೂ, ಪೊಲೀಸರು ಆತನ ವಿಚಾರಣೆ ಕೈಗೊಂಡಿದ್ದು, ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement