ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

26 ದಿನಗಳಲ್ಲಿ 9 ಜನರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಂದ ಅರಣ್ಯ ಇಲಾಖೆ ಸಿಬ್ಬಂದಿ

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ (ವಿಟಿಆರ್) ಪ್ರದೇಶದಲ್ಲಿ ಕಳೆದ 26 ದಿನಗಳಲ್ಲಿ  ಒಂಬತ್ತು ಜನರನ್ನು ಕೊಂದ ನರಭಕ್ಷಕ ಹುಲಿಯನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದು, ಇದರಿಂದ ನಿರಾಳತೆ ಉಂಟಾಗಿದೆ.
Published on

ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ (ವಿಟಿಆರ್) ಪ್ರದೇಶದಲ್ಲಿ ಕಳೆದ 26 ದಿನಗಳಲ್ಲಿ  ಒಂಬತ್ತು ಜನರನ್ನು ಕೊಂದ ನರಭಕ್ಷಕ ಹುಲಿಯನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದು, ಇದರಿಂದ ನಿರಾಳತೆ ಉಂಟಾಗಿದೆ.

ವಿಟಿಆರ್‌ನ ರಾಘಿಯಾ ಅರಣ್ಯದ ಬಲುವಾ ಗ್ರಾಮದಲ್ಲಿ ಉಗ್ರ ಹುಲಿ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಕೊಂದ ನಂತರ ವಿಶೇಷ ಕಾರ್ಯಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡ ಎಂಟು ಸದಸ್ಯರ ತಂಡವು ಶನಿವಾರ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ಮೃತರನ್ನು ಬಬಿತಾ ದೇವಿ (23) ಮತ್ತು ಆಕೆಯ ಏಳು ವರ್ಷದ ಮಗ ಶಿವಂ ಎಂದು ಗುರುತಿಸಲಾಗಿದೆ.

ಪಶ್ಚಿಮ ಚಂಪಾರಣ ಜಿಲ್ಲೆಯ ರಾಮನಗರ ಬ್ಲಾಕ್‌ನ ಡುಮ್ರಿ ಗ್ರಾಮದ ನಿವಾಸಿಯಾದ 35 ವರ್ಷದ ಸಂಜಯ್ ಮಹತೋ ಎಂಬಾತನ ಮೇಲೆ ಹುಲಿ ಶುಕ್ರವಾರ ದಾಳಿ ನಡೆಸಿ ಸಾವಿಗೆ ಕಾರಣವಾದ ನಂತರ ಮುಖ್ಯ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ಅವರು ಹುಲಿಯನ್ನು ಶೂಟ್ ಮಾಡುವ ಆದೇಶ ಹೊರಡಿಸಿದ್ದರು.

ಅರಣ್ಯ ಪ್ರದೇಶದ ಸಮೀಪಕ್ಕೆ ಸಂತ್ರಸ್ಥ ಮಲವಿಸರ್ಜನೆಗೆ ತೆರಳಿದ್ದ ವೇಳೆ ಹುಲಿ ಆತನನ್ನು ಕೊಂದು ಹಾಕಿತ್ತು. ನಿವಾಸಿಗಳ ಮೇಲೆ ಪದೇ ಪದೆ ಹಲ್ಲೆಗಳು ನಡೆಯುತ್ತಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಹುಲಿಯು ಮಾನವ ವಾಸಸ್ಥಳದಲ್ಲಿ ವಾಸಿಸಲು ಒಗ್ಗಿಕೊಂಡಿದೆ ಎಂಬುದು ದೃಢಪಟ್ಟಾಗ ಕಾರ್ಯವಿಧಾನದ ಪ್ರಕಾರ ಹುಲಿಯನ್ನು ಕೊಲ್ಲಲು ಆದೇಶಗಳನ್ನು ನೀಡಲಾಗುತ್ತದೆ. ಕಳೆದ ಮೂರು ದಿನಗಳಲ್ಲಿ ಹುಲಿ ನಾಲ್ವರನ್ನು ಕೊಂದಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ರಾತ್ರಿ 12 ವರ್ಷದ ಬಾಲಕಿ ನರಭಕ್ಷಕ ಹುಲಿಗೆ ಬಲಿಯಾಗಿದ್ದಳು. ಮೃತಳ ಸಿಗಡಿ ಗ್ರಾಮದ ನಿವಾಸಿ ಬಗಾದಿ ಕುಮಾರಿ ಎಂದು ಗುರುತಿಸಲಾಗಿದೆ. ಆಕೆ ತನ್ನ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ.

ಮೃತರೆಲ್ಲರೂ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಪಕ್ಕದ ಗ್ರಾಮಗಳಿಗೆ ಸೇರಿದವರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲು ಶಾರ್ಪ್ ಶೂಟರ್ ಶಫತ್ ಅಲಿ ಅವರನ್ನು ಹೈದರಾಬಾದ್‌ನಿಂದ ಬಿಹಾರಕ್ಕೆ ಕರೆಸಲಾಯಿತು. ಆದರೆ, ಹುಲಿಯನ್ನು ಹಿಡಿಯುವ ಪ್ರಯತ್ನಗಳು ವ್ಯರ್ಥವಾಯಿತು. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com