ಪ್ರೇಯಸಿ ಕಾಣಲು ಹೋದ ಬೆಂಗಳೂರು ಟೆಕಿಗೆ ಶಾಕ್: ಮತ್ತಿನ ಔಷಧಿ, ಬಲವಂತದ ಮದುವೆ, 40 ಲಕ್ಷ ರೂ ಹಣಕ್ಕೆ ಡಿಮ್ಯಾಂಡ್

ತಾವು ಪ್ರೀತಿಸಿದ ಹುಡುಗಿಯ ಮದುವೆಯಾಗಲು ಹುಡುಗರು ನಾನಾ ಕಷ್ಟಗಳನ್ನು ಪಡುತ್ತಾರೆ. ಆದರೆ ಇಲ್ಲೊಬ್ಬ ಬೆಂಗಳೂರು ಮೂಲದ ಟೆಕಿ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಬಲವಂತದ ಮದುವೆ (ಸಂಗ್ರಹ ಚಿತ್ರ)
ಬಲವಂತದ ಮದುವೆ (ಸಂಗ್ರಹ ಚಿತ್ರ)

ಭೋಪಾಲ್‌: ತಾವು ಪ್ರೀತಿಸಿದ ಹುಡುಗಿಯ ಮದುವೆಯಾಗಲು ಹುಡುಗರು ನಾನಾ ಕಷ್ಟಗಳನ್ನು ಪಡುತ್ತಾರೆ. ಆದರೆ ಇಲ್ಲೊಬ್ಬ ಬೆಂಗಳೂರು ಮೂಲದ ಟೆಕಿ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಹೌದು.. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಗೂಗಲ್ ಟೆಕ್ಕಿ ಒಬ್ಬರು ಯುವತಿಯ ಸ್ನೇಹ ಬೆಳೆಸಿ, ಆಕೆಯ ಮನೆಯವರ ಕಡೆಯಿಂದ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ. ಗೂಗಲ್ ಇಂಡಿಯಾದ ಹಿರಿಯ ಮ್ಯಾನೇಜರ್ ಮಧ್ಯಪ್ರದೇಶ ಭೋಪಾಲ್‌ ಮೂಲದ ಗಣೇಶ್ ಶಂಕರ್ ಎನ್ನುವರು, ಶಿಲ್ಲಾಂಗ್‌ನ ಐಐಎಂನಲ್ಲಿ ಎಂಬಿಎ ಓದುವಾಗ ಭೂಪಾಲ್‌ನ ಸುಜಾತಾ ಎನ್ನುವ ಯುವತಿ ಪರಿಚಯವಾಗಿ ಸ್ನೇಹ ಬೆಳೆಸಿದ್ದರು. ಬಳಿಕ ಇಬ್ಬರೂ ಐದು ವರ್ಷ ಪ್ರೀತಿಯಲ್ಲಿದ್ದರು.

ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲು ಭೋಪಾಲ್‌ಗೆ ಹೋಗಿದ್ದ ಗಣೇಶ್ ಅವರಿಗೆ ಆಶ್ಚರ್ಯ ಮತ್ತು ಶಾಕ್ ಕಾದಿತ್ತು. ಹುಡುಗಿ ಮನೆಯವರು ಒಂದೆರಡು ದಿನ ಗಣೇಶನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆ ನಂತರ ಹುಡುಗಿ ಮನೆಯವರು ಆತನಿಗೆ ಮತ್ತು ಬರುವ ಔಷಧಿ ನೀಡಿ, ಕತ್ತಲು ಕೋಣೆಯಲ್ಲಿ ಗಣೇಶನನ್ನು ಕೂಡಿ ಹಾಕಿದ್ದರು. ಬಳಿಕ ಗಣೇಶ ಅವರನ್ನು ಬೆದರಿಸಿ ಯುವತಿ ಜೊತೆ ಮದುವೆ ಮಾಡಿಸಿ ಫೋಟೊಗಳನ್ನು ತೆಗೆದಿದ್ದಾರೆ.

ಇಷ್ಟೇ ಅಲ್ಲದೇ ಗಣೇಶ್ ಅವರಿಗೆ ಯುವತಿ ಮನೆಯವರು, ‘ನೀನು 40 ಲಕ್ಷ ಕೊಟ್ಟರೇ ಸರಿ, ಇಲ್ಲದಿದ್ದರೇ ನಿನ್ನ ವಿರುದ್ಧ ಪೊಲೀಸ್ ದೂರು ಕೊಟ್ಟು ಜೈಲಿಗೆ ಕಳಿಸಲಾಗುವುದು’ ಎಂದು ಮತ್ತೊಂದು ಬೆದರಿಕೆ ಹಾಕಿದ್ದಾರೆ.

ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಭೂಪಾಲ್‌ನ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ  ಗಣೇಶ್ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಹಾಗೂ ಯುವತಿಯ ಮನೆಯ ಮೂವರ ವಿರುದ್ಧ (ಯುವತಿ ಸುಜಾತಾ, ತಂದೆ ಕಮಲೇಶ್ ಸಿಂಗ್, ಸಹೋದರಾದ ಶೈವೇಶ್ ಸಿಂಗ್, ವಿಜೇಂದ್ರ ಕುಮಾರ್) ಐಪಿಸಿ ಸೆಕ್ಷನ್ 294, 323, 342, 384, 506 ಮತ್ತು 34ರ ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭೋಪಾಲ್‌ ಕಮಲಾ ನಗರ ಪೊಲೀಸ್ ಠಾಣೆ ಅಧಿಕಾರಿ ಅನಿಲ್ ಕುಮಾರ್ ವಾಜಪೇಯಿ ಅವರು, ‘ಗೂಗಲ್ ಟೆಕ್ಕಿ ಗಣೇಶ್ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಯುವಕ ಗಣೇಶ್ ಕೂಡ ಬೇರೆ ಯುವತಿಯನ್ನು ಈ ಮುಂಚೆ ಮದುವೆಯಾಗಿದ್ದಾನೆಂದು ಸುಜಾತಾ ಮನೆಯವರು ನಮಗೆ ತಿಳಿಸಿದ್ದಾರೆ. ಸುಜಾತಾ ಮನೆಯವರು ಗಣೇಶನಿಂದ ಮೋಸವಾಗಿರುವುದಾಗಿ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರೀತಿಸಿದ ಹುಡುಗಿಯನ್ನು ವರಿಸಿದರೂ ಪಾಪ ಹುಡುಗರ ಸಂಕಷ್ಟ ಮಾತ್ರ ತಪ್ಪಲ್ಲ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com