ವಿಡಿಯೋ ನೋಡಿ: ಗಂಟೆಗೆ 300 ಕಿಮೀ ಮಾರ್ಕ್ ಬೆನ್ನಟ್ಟಿದ ಬಿಎಂಡಬ್ಲೂ ಟ್ರಕ್‌ಗೆ ಡಿಕ್ಕಿ; ನಾಲ್ವರು ಸಾವು

ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇನಲ್ಲಿ ಬಿಎಂಡಬ್ಲೂ ಕಾರ್‌ ಅನ್ನು ಗಂಟೆಗೆ 300 ಕಿಮೀ ವೇಗವಾಗಿ ಮುನ್ನುಗ್ಗಿಸುವಾಗ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ಸುಲ್ತಾನ್‌ಪುರ್ ಬಳಿ ನಡೆದಿದೆ.
ಅಪಘಾತಕ್ಕೀಡಾದ ಕಾರು
ಅಪಘಾತಕ್ಕೀಡಾದ ಕಾರು

ಲಖನೌ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇನಲ್ಲಿ ಬಿಎಂಡಬ್ಲೂ ಕಾರ್‌ ಅನ್ನು ಗಂಟೆಗೆ 300 ಕಿಮೀ ವೇಗವಾಗಿ ಮುನ್ನುಗ್ಗಿಸುವಾಗ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ಸುಲ್ತಾನ್‌ಪುರ್ ಬಳಿ ನಡೆದಿದೆ.

ಕಳೆದ ಶುಕ್ರವಾರ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರನ್ನು ಬಿಹಾರದ ಆನಂದ್ ಪ್ರಕಾಶ್, ಅಖಿಲೇಶ್ ಸಿಂಗ್, ದೀಪಕ್ ಕುಮಾರ್ ಹಾಗೂ ಮುಕೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ 30 ವರ್ಷ ಆಸುಪಾಸಿನವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇನಲ್ಲಿ ಸುಲ್ತಾನಪುರಕ್ಕೆ ತೆರಳುತ್ತಿದ್ದ ಈ ಯುವಕರು ಪಾನಮತ್ತರಾಗಿದ್ದು, ಚಾಲಕ ಆನಂದ್ ಪ್ರಕಾಶ್‌ ಗೆ ವೇಗವಾಗಿ ಕಾರು ಚಲಾಯಿಸಲು ಪುಸಲಾಯಿಸಿದ್ದರು. ಈ ಘಟನೆ ಫೇಸ್‌ಬುಕ್ ಲೈವ್ ವಿಡಿಯೊದಲ್ಲಿ ದಾಖಲಾಗಿದ್ದು, ಆ ವಿಡಿಯೊ ವೈರಲ್ ಆಗಿದೆ.

ವಿಡಿಯೋದಲ್ಲಿ ಕಾರನ್ನು ಗಂಟೆಗೆ 300 ಕಿಮೀ ವೇಗದಲ್ಲಿ ಚಲಾಯಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಯುವಕರು ಲೈವ್ ವಿಡಿಯೊ ಮಾಡಿದ್ದಾರೆ. ಈ ವೇಳೆ ‘ಹೀಗೆ ಹೋದ್ರೆ ನಾವು ನಾಲ್ವರು ಸತ್ತೇ ಹೋಗುತ್ತೇವೆ’ ಎಂದು ಚಾಲಕ ಆನಂದ್ ಪ್ರಕಾಶ್ ಲೈವ್‌ನಲ್ಲಿ ಹೇಳಿರುವುದು ದಾಖಲಾಗಿದ್ದು, ನಂತರ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 

ಅತಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಒಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲೂ ಕಾರು ಸಂಪೂರ್ಣ ಪುಡಿ ಪುಡಿಯಾಗಿದ್ದು, ಯುವಕರ ದೇಹಗಳು ಸಹ ಛಿದ್ರ ಛಿದ್ರ ಆಗಿವೆ.

ಈ ಸಂಬಂಧ ಕಂಟೈನರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com