2024ರ ವೇಳೆಗೆ ಕಲ್ಲಿದ್ದಲು ಆಮದು ಸ್ಥಗಿತ: ಕೇಂದ್ರ ಸರ್ಕಾರ

2024ರ ವೇಳೆಗೆ ಭಾರತ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2024ರ ವೇಳೆಗೆ ಭಾರತ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು, ಗಣನೀಯವಾಗಿ ಕುಸಿದಿರುವ ಒಣ ಇಂಧನ (ಕಲ್ಲಿದ್ದಲು)ದ ಆಮದನ್ನು 2024ರ ವೇಳೆಗೆ ನಿಲ್ಲಿಸಲಾಗುವುದು ಎಂದು ಗುರುವಾರ ಹೇಳಿದ್ದಾರೆ.

ದೆಹಲಿಯ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಖನಿಜ ಮತ್ತು ಇಂಧನ ಸಂಪನ್ಮೂಲಗಳ ಆಸ್ತಿ ಖಾತೆಗಳ ಸಂಕಲನ' ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಪ್ರಸ್ತುತ ಸರ್ಕಾರವು ಸಂಪೂರ್ಣವಾಗಿ ಪಾರದರ್ಶಕವಾಗಿ ಸಾಂಸ್ಥಿಕಗೊಳಿಸಿದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆಸಿದೆ ಎಂದರು.

ಅಂತೆಯೇ ದೇಶದ ಖನಿಜ ಆಸ್ತಿಗಳ ಮೇಲಿನ ಆಸ್ತಿ ಖಾತೆಯ ಮೊದಲ ಸಂಕಲನವನ್ನು ಹೊರತರಲು ಸಿಎಜಿ ಕಚೇರಿಗೆ ಪೂರಕವಾಗಿ ಮಾಹಿತಿ ನೀಡಲಾಗಿತ್ತು. ಪರಿಣಾಮ ದೇಶದ ವಿವಿಧ ರಾಜ್ಯಗಳಲ್ಲಿ ಹರಡಿರುವ ಖನಿಜ ಸಂಪನ್ಮೂಲಗಳ ಸಮಗ್ರ ಚಿತ್ರಣವನ್ನು ಈ ಸಂಕಲನ ವರದಿಯು ಪ್ರಸ್ತುತ ಪಡಿಸುತ್ತದೆ. ಪರಿಸರ ವಿಜ್ಞಾನ ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಸುಸ್ಥಿರ ಗಣಿಗಾರಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಸಂಕಲನವು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯದ ಆಸ್ತಿ ಖಾತೆಗಳ ಮಾಹಿತಿಯನ್ನು ಒಟ್ಟುಗೂಡಿಸಿ, ಸರ್ಕಾರಿ ಲೆಕ್ಕಪತ್ರ ಮಾನದಂಡಗಳ ಸಲಹಾ ಮಂಡಳಿಯು ರಾಜ್ಯಗಳಲ್ಲಿನ ಖನಿಜ ಮತ್ತು ಇಂಧನ ಸಂಪನ್ಮೂಲಗಳ ಆಸ್ತಿ ಖಾತೆಗಳ ಸಂಕಲನವನ್ನು ಸಿದ್ಧಪಡಿಸಿದ್ದು, 28 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿನ ಎಲ್ಲಾ ನಾಲ್ಕು ಪಳೆಯುಳಿಕೆ ಇಂಧನಗಳು, 40 ಪ್ರಮುಖ ಖನಿಜಗಳು ಮತ್ತು 63 ಸಣ್ಣ ಖನಿಜಗಳ ವಿವರಗಳನ್ನು ಈ ಸಂಕಲನವು ಒಳಗೊಂಡಿದೆ ಮತ್ತು ಅಧ್ಯಯನದ ಸಮಯದಲ್ಲಿ ಗಮನಿಸಲಾದ ನಾವೀನ್ಯತೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಸಹ ಒಳಗೊಂಡಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com