ದೇಶದ ಗಡಿ ಕಾಯುವ ಯೋಧರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ ತಲುಪಿದ ಪ್ರಧಾನಿ ಮೋದಿ!
ಶ್ರೀನಗರ: ದೇಶದ ಗಡಿ ಕಾಯುವ ಯೋಧರೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಕಾರ್ಗಿಲ್ ತಲುಪಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಸೈನಿಕರನ್ನು ಭೇಟಿ ಮಾಡುವ ಮೋದಿಯವರು ನಂತರ ಅವರೊಂದಿಗೆ ಚಹಾ ಸೇವಿಸಿ ದೀಪಾವಳಿ ಆಚರಿಸಲಿದ್ದಾರೆಂದು ತಿಳಿದುಬಂದಿದೆ.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ವರ್ಷದಿಂದಲೂ ಅವರು ದೀಪಾವಳಿಯನ್ನು ಸೇನಾ ಯೋಧರೊಂದಿಗೆ ಆಚರಿಸುತ್ತಿದ್ದಾರೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ದ್ರಾಸ್ ತಲುಪಿದ್ದು, ಸೇನೆಯ ಯೋಧರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ದೀಪಾವಳಿಯ ಸಂಭ್ರವನ್ನು ಆಚರಿಸಲು ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮೊದಲಿಗೆ ಬಾಬಾ ಕೇದಾರನಾಥ ಹಾಗೂ ಬದಿರಿನಾಥ ದರ್ಶನವನ್ನು ಅಕ್ಟೋಬರ್ 21 ರಂದು ಮಾಡಿದ್ದರೆ, ಆ ಬಳಿಕ 23 ಅಕ್ಟೋಬರ್ನಂದು ಅಯೋಧ್ಯೆಯಲ್ಲಿ ನಡೆದ ದೀಪೋತ್ಸವದಲ್ಲಿ ಭಾಗಿಯಾಗಿದ್ದರು. ಅದರೊಂದಿಗೆ ಅಯೋಧ್ಯಕ್ಕೆ ಭೇಟಿ ನೀಡಿ ರಾಮಲಲ್ಲಾ ವೃಜ್ಮಾನ್ ದರ್ಶನವನ್ನೂ ಪಡೆದಿದ್ದರು.