ಭೋಪಾಲ್: ಅಪಾಯದಲ್ಲಿದ್ದ ಪ್ರಯಾಣಿಕರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದ ರೈಲ್ವೇ ಸುರಕ್ಷತಾ ಪೊಲೀಸರೇ ಇಂದು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ರೈಲ್ವೇ ರಕ್ಷಣಾ ಪಡೆಯ ಇಬ್ಬರು ಹೆಡ್ ಕಾನ್ಸ್ಟೆಬಲ್ಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮೊರೆನಾದಿಂದ ಏಳು ಕಿಮೀ ದೂರದಲ್ಲಿರುವ ಸಾಂಕ್ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಂತ್ರಸ್ತರು ಗ್ವಾಲಿಯರ್-ಆಗ್ರಾ ಪ್ಯಾಸೆಂಜರ್ ರೈಲನ್ನು ಅಲ್ಲಿಯೇ ನಿಲ್ಲಿಸಿದ್ದನ್ನು ಪರಿಶೀಲಿಸುತ್ತಿದ್ದರು ಎಂದು ಮೊರೆನಾ ಆರ್ಪಿಎಫ್ ಪೊಲೀಸ್ ಠಾಣೆಯ ಉಸ್ತುವಾರಿ ಹರಿಕಿಶನ್ ಮೀನಾ ತಿಳಿಸಿದ್ದಾರೆ.
ಹೆಡ್ ಕಾನ್ಸ್ಟೆಬಲ್ಗಳಾದ ಅಶೋಕ್ ಕುಮಾರ್ (56) ಮತ್ತು ನವರಾಜ್ ಸಿಂಗ್ (40) ನಿಲ್ದಾಣದ ಪ್ಯಾಸೆಂಜರ್ ರೈಲನ್ನು ಪರಿಶೀಲಿಸಲು ಮಧ್ಯದ ಹಳಿಯಲ್ಲಿದ್ದಾಗ, ದೆಹಲಿಯಿಂದ ಬರುತ್ತಿದ್ದ ಡ್ಯುರಂಟೋ ಎಕ್ಸ್ಪ್ರೆಸ್ ರೈಲು ಹಠಾತ್ತನೆ ಹಾದು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಇನ್ನೊಂದು ಬದಿಯ ಹಳಿಯಲ್ಲಿ ಗೂಡ್ಸ್ ರೈಲು ನಿಂತಿದ್ದರಿಂದ ಸಂತ್ರಸ್ತರು ಸುರಕ್ಷಿತವಾಗಿ ಓಡಲು ಸಾಧ್ಯವಾಗಲಿಲ್ಲ. ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.
Advertisement