ಕೊಥುರ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದು, ವಾಸ್ತವವಾಗಿ ಯಾವುದೇ ಬೆಂಬಲವಿಲ್ಲದಿದ್ದರೂ ಜಾಹಿರಾತು ಆಧಾರದ ಆಧಾರದ ಮೇಲೆ ಎಎಪಿ ಕೇವಲ ಗೊಂದಲ ಸೃಷ್ಟಿಸುತ್ತಿದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗುಜರಾತ್ ನಲ್ಲಿ ತೀವ್ರ ಆಡಳಿತ ವಿರೋಧಿ ಅಲೆ ಇರುವುದಾಗಿ ಹೇಳಿದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಣಾಮಕಾರಿಯಾಗಿ ಸ್ಪರ್ಧಿಸಲಿದೆ. ಎಎಪಿ ಬರೀ ಬಾಯಿ ಮಾತಲ್ಲಿ ಮಾತ್ರ. ವಸ್ತುಸ್ಥಿತಿ ಹಾಗಿಲ್ಲ, ಗುಜರಾತ್ ನಲ್ಲಿ ಕಾಂಗ್ರೆಸ್ ಸಾಲಿಡ್ ಆಗಿದೆ ಎಂದು ಹೇಳಿದರು.
ಗುಜರಾತಿನಲ್ಲಿ ತೀವ್ರ ಆಡಳಿತ ವಿರೋಧಿ ಅಲೆಯಿದೆ. ಎಎಪಿ ನೀಡುವ ಜಾಹಿರಾತು ಆಧಾರದ ಮೇಲೆ ಮಾಧ್ಯಮಗಳು ಕೇವಲ ಗೊಂದಲ ಸೃಷ್ಟಿಸುತ್ತಿವೆ. ಕಾಂಗ್ರೆಸ್ ಪಕ್ಷ ಗುಜರಾತ್ ನಲ್ಲಿ ಉತ್ತಮವಾಗಿದೆ. ಕಾಂಗ್ರೆಸ್ ಪಕ್ಷ ಗುಜರಾತ್ ನಲ್ಲಿ ಗೆಲ್ಲಲಿದೆ ಎಂದರು.
ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ ರಾಹುಲ್ ಗಾಂಧಿ, ಮೊರ್ಬಿ ಸೇತುವೆ ಘಟನೆಯನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಅಲ್ಲಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದನ್ನು ರಾಜಕೀಯಗೊಳಿಸುವುದು ಅವರಿಗೆ ಮಾಡಿದ ಅಗೌರವವಾಗುತ್ತದೆ. ಅದರಲ್ಲಿ ನಾನು ರಾಜಕೀಯ ಮಾಡಲು ಬಯಸುವುದಿಲ್ಲ ಎಂದರು.
ಟಿಆರ್ ಎಸ್ ಜೊತೆಗೆ ಮೈತ್ರಿ ಕುರಿತ ಸಾಧ್ಯತೆಯನ್ನು ತಳ್ಳಿ ಹಾಕಿದ ರಾಹುಲ್ ಗಾಂಧಿ, ಟಿಆರ್ ಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಖಚಿತಪಡಿಸಿದರು. ಟಿಆರ್ ಎಸ್ ನ ಭ್ರಷ್ಟಾಚಾರ ವರ್ತನೆಯನ್ನು ನಾವು ಒಪ್ಪಿಕೊಳ್ಳಲ್ಲ. ಅವರ ವರ್ತನೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.
Advertisement