ರಾಜಕೀಯ ಪ್ರತಿಸ್ಪರ್ಧಿಗಳ ಭೇಟಿಯಾಗಿ ಮಾತನಾಡುವುದು ಒಬ್ಬರ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ: ಗುಲಾಂ ನಬಿ ಆಜಾದ್

ಪಕ್ಷವನ್ನು ತೊರೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಪ್ತವಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಿರುದ್ಧ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ನವದೆಹಲಿ: ಪಕ್ಷವನ್ನು ತೊರೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಪ್ತವಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಿರುದ್ಧ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಪ್ರತಿಸ್ಪರ್ಧಿಗಳನ್ನು ಭೇಟಿಯಾಗುವುದು ಮತ್ತು ಮಾತನಾಡುವುದು ಒಬ್ಬರ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಆಜಾದ್ ಅವರು ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಬಾಂಧವ್ಯವನ್ನು ಕೊನೆಗೊಳಿಸಿಕೊಂಡ ನಂತರ, ಡಿಎನ್‌ಎ ಬದಲಾಗಿದೆ (DNA has been Modi-fied) ಎಂದು ಕಾಂಗ್ರೆಸ್ ಆರೋಪಿಸಿತ್ತು ಮತ್ತು ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಮೋದಿ ಭಾವನಾತ್ಮಕವಾಗಿ ಆಜಾದ್ ಅವರನ್ನು 'ನಿಜವಾದ ಸ್ನೇಹಿತ' ಎಂದು ಹೊಗಳಿದ್ದರು. ಇದನ್ನು ಉಲ್ಲೇಖಿಸಿ ಹಲವಾರು ಕಾಂಗ್ರೆಸ್ ನಾಯಕರು ಆಜಾದ್ ವಿರುದ್ಧ ಕಿಡಿಕಾರಿದ್ದರು.

'22 ಪಕ್ಷಗಳ ಸಂಸದರು ನನ್ನ ಬಗ್ಗೆ ಮಾತನಾಡಿದ್ದಾರೆ (ನನ್ನ ಬೀಳ್ಕೊಡುಗೆ ವೇಳೆ) ಆದರೆ ಪ್ರಧಾನಿ ಹೇಳಿದ್ದನ್ನು ಮಾತ್ರ ಹೈಲೈಟ್ ಮಾಡಲಾಗಿದೆ' ಎಂದ ಅವರು, ಬೇರೆ ರಾಜಕೀಯ ಪಕ್ಷಗಳ ಜನರನ್ನು ಭೇಟಿ ಮಾಡಿ ಮಾತನಾಡಿದರೆ ನಿಮ್ಮ ಡಿಎನ್‌ಎ ಬದಲಾಗುವುದಿಲ್ಲ. ಇಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ‘ಯುದ್ಧ’ ಕಾಣಿಸುತ್ತಿದೆ ಎಂದು ಆಜಾದ್ ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಮೋದಿಯವರ ಭಾವನಾತ್ಮಕ ಭಾಷಣವನ್ನು ಉಲ್ಲೇಖಿಸಿದ ಆಜಾದ್, 'ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯಸಭೆಯಿಂದ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುವುದು ಸಂಪ್ರದಾಯ ಮತ್ತು ವಿವಿಧ ಪಕ್ಷಗಳ ಸಂಸದರು ಈ ಸಂದರ್ಭದಲ್ಲಿ ಭಾಷಣ ಮಾಡುತ್ತಾರೆ. ಭಾರತದ ಸಂಯೋಜಿತ ಸಂಸ್ಕೃತಿಯು ಇತ್ತೀಚಿನ ವರ್ಷಗಳಲ್ಲಿ ಬದಲಾಗಿದೆ ಎಂದು ಅವರು ಹೇಳಿದರು.

'ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಇದ್ದರು. ಹಿಂದೂಗಳು ಅರೇಬಿಕ್ ಮತ್ತು ಮುಸ್ಲಿಮರು ಗೀತಾವನ್ನು ಅಧ್ಯಯನ ಮಾಡುವುದು ಅಸಾಮಾನ್ಯವೇನಲ್ಲ. ಇದು ನಮ್ಮ ದೇಶದ ಸಂಯೋಜಿತ ಸಂಸ್ಕೃತಿಯಾಗಿತ್ತು. ಈ ಹಿಂದೆ, ದೆಹಲಿಯ ರಾಜಕೀಯ ವಲಯಗಳಲ್ಲಿ ಈದ್ ಮಿಲನ್ ಮತ್ತು ದೀಪಾವಳಿ ಮಿಲನ್ ಎಂಬ ಎರಡು ಸಂದರ್ಭಗಳನ್ನು ಮಾತ್ರ ಆಚರಿಸಲಾಗುತ್ತಿತ್ತು. ಇಬ್ಬರೂ (ಮಾಜಿ ಪ್ರಧಾನಿ ಅಟಲ್ ಬಿಹಾರಿ) ವಾಜಪೇಯಿ ಜಿ ಮತ್ತು ಇಂದಿರಾಗಾಂಧಿ ಬರುತ್ತಿದ್ದರು. ಈಗ ರಾಜಕೀಯ ಪಕ್ಷಗಳು ಯುದ್ಧದಲ್ಲಿ ಮುಳುಗಿರುವಂತೆ ಕಾಣುತ್ತಿವೆ. ದುರದೃಷ್ಟವಶಾತ್ ನಾವೆಲ್ಲ ಒಡೆದು ಹೋಗಿರುವುದು ಬೇಸರ ತಂದಿದೆ' ಎಂದರು.

73 ವರ್ಷದ ಆಜಾದ್ ಅವರು ಆಗಸ್ಟ್ 26 ರಂದು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದರು. ಈ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇಂದು ತಮ್ಮ ಹೊಸ ರಾಜಕೀಯ ಪ್ರಯಾಣವನ್ನು ಇಂದು (ಭಾನುವಾರ) ಜಮ್ಮುವಿನಿಂದ ಪ್ರಾರಂಭಿಸಲಿದ್ದಾರೆ. ಅಲ್ಲಿ ಅವರು ತಮ್ಮದೇ ಪಕ್ಷದ ಮೊದಲ ಘಟಕವನ್ನು ಸ್ಥಾಪಿಸಲಿದ್ದಾರೆ. ಜಮ್ಮುವಿನಲ್ಲಿ ಆಜಾದ್ ಅವರ ಮೊದಲ ಸಾರ್ವಜನಿಕ ರ‍್ಯಾಲಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತರು ಸಾರ್ವಜನಿಕ ಸಭೆಯ ಮುನ್ನಾದಿನದಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com