ಕಾನ್ಪುರ: ಕಳೆದ ವರ್ಷ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು 200 ಕೋಟಿ ರೂಪಾಯಿ ನಗದು ಮತ್ತು 23 ಕೆ.ಜಿ ಚಿನ್ನವನ್ನು ಕೇಂದ್ರದ ತನಿಖಾ ತಂಡಗಳು ವಶಪಡಿಸಿಕೊಂಡಿದ್ದವು. ಈ ಪ್ರಕರಣದಲ್ಲಿ ಎಂಟು ತಿಂಗಳು ಜೈಲಿನಲ್ಲಿದ್ದ ನಂತರ ಉದ್ಯಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಉದ್ಯಮಿಯನ್ನು ಬಂಧಿಸಿದ್ದು, ಗದ್ದಲಕ್ಕೆ ಕಾರಣವಾಗಿತ್ತು. ಕಾನ್ಪುರ ಮೂಲದ ಸುಗಂಧ ದ್ರವ್ಯ ವ್ಯಾಪಾರಿಯು ಸಮಾಜವಾದಿ ಪಕ್ಷದ (ಎಸ್ಪಿ) 'ಸ್ನೇಹಿತ' ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಜೈನ್ ಬಿಜೆಪಿಗೆ ಸೇರಿದವರು ಎಂದು ವಿರೋಧ ಪಕ್ಷ ಆರೋಪಿಸಿತ್ತು.
ವಿಶೇಷ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿ ಹೊರಡಿಸಿದ ಆದೇಶದ ನಂತರ, ಪಿಯೂಷ್ ಜೈನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕಾನ್ಪುರ ಜೈಲು ಅಧೀಕ್ಷಕ ಬಿಧು ದತ್ ಪಾಂಡೆ ಗುರುವಾರ ತಿಳಿಸಿದ್ದಾರೆ.
ಕಳೆದ ವಾರ ಅಲಹಾಬಾದ್ ಹೈಕೋರ್ಟ್ ಜೈನ್ ಅವರ ಜಾಮೀನು ಅರ್ಜಿಯನ್ನು ಅಂಗೀಕರಿಸಿದ ನಂತರ ಜಾಮೀನು ನೀಡಿರುವ ವಿಶೇಷ ಸಿಜೆಎಂ, ಜೈನ್ ಅವರ ಕುಟುಂಬ ಸದಸ್ಯರಿಬ್ಬರು ತಲಾ 10 ಲಕ್ಷ ರೂಪಾಯಿಯ ಶ್ಯೂರಿಟಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಡಿಸೆಂಬರ್ 26 ರಂದು ಜೈನ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಭಾರಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ನಂತರ ಜೈನ್ ಅವರನ್ನು ಬಂಧಿಸಲಾಗಿತ್ತು.
Advertisement