ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ವ್ಯಕ್ತಿಗೆ ಮತ ಚಲಾಯಿಸಲು 25 ಕೋಟಿ ರೂ. ಆಫರ್ ನೀಡಲಾಗಿತ್ತು: ರಾಜೇಂದ್ರ ಗುಧಾ

ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಿದರೆ ನನಗೆ ₹ 25 ಕೋಟಿ ನೀಡುವುದಾಗಿ ಹೇಳಲಾಗಿತ್ತು ಎಂದು ರಾಜಸ್ಥಾನದ ಸೈನಿಕರ ಕಲ್ಯಾಣ ಖಾತೆ ಸಚಿವ ರಾಜೇಂದ್ರ ಗುಧಾ ಹೇಳಿದ್ದಾರೆ.
ರಾಜೇಂದ್ರ ಗುಧಾ
ರಾಜೇಂದ್ರ ಗುಧಾ

ಜೈಪುರ: ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಿದರೆ ನನಗೆ ₹ 25 ಕೋಟಿ ನೀಡುವುದಾಗಿ ಹೇಳಲಾಗಿತ್ತು ಎಂದು ರಾಜಸ್ಥಾನದ ಸೈನಿಕ ಕಲ್ಯಾಣ ಖಾತೆ ಸಚಿವ ರಾಜೇಂದ್ರ ಗುಧಾ ಹೇಳಿದ್ದಾರೆ.

2020ರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ಬಂಡಾಯದ ಸಂದರ್ಭದಲ್ಲೂ ಕೂಡ ಇದೇ ರೀತಿ ನನಗೆ ₹ 60 ಕೋಟಿ ನೀಡುವುದಾಗಿ ಆಫರ್ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಪಕ್ಷ ಅಥವಾ ವ್ಯಕ್ತಿಯ ಹೆಸರನ್ನು ಹೇಳಿಲ್ಲ.

ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ಗುಧಾ, ಸೋಮವಾರ ಜುಂಜುನುವಿನಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮಂಗಳವಾರ ಲಭ್ಯವಾಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ,  ನಿರ್ದಿಷ್ಟ ವ್ಯಕ್ತಿಗೆ ಮತವನ್ನು ನೀಡಲು ನನಗೆ ₹ 25 ಕೋಟಿಯ ಪ್ರಸ್ತಾಪವಿತ್ತು. ನಂತರ ನಾನು ನನ್ನ ಹೆಂಡತಿಯನ್ನು ಕೇಳಿದೆ. ಅದಕ್ಕವಳು ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದಾಗಲೂ ನನಗೆ ₹ 60 ಕೋಟಿಯನ್ನು ಆಫರ್ ಮಾಡಲಾಗಿತ್ತು. ಆಗಲೂ ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದೆ. ಆಗ ನನ್ನ ಹೆಂಡತಿ, ಮಗ ಮತ್ತು ಮಗಳು, 'ನಮಗೆ ದುಡ್ಡು ಬೇಡ, ಒಳ್ಳೆಯತನ ಸಾಕು ಎಂದಿದ್ದರು' ಎಂದು ಸಚಿವರು ತಿಳಿಸಿದ್ದಾರೆ.

ನಿಮ್ಮ ಜೊತೆಗಿರುವವರು ಉತ್ತಮವಾಗಿ ಯೋಚಿಸಿದಾಗ ಎಲ್ಲವೂ ಸರಿಹೋಗುತ್ತದೆ’ ಎಂದು ಶಾಲಾ ಬಾಲಕಿಯೊಬ್ಬಳಿಗೆ ತಿಳಿಸಿದರು.

2018ರ ವಿಧಾನಸಭೆ ಚುವಾವಣೆಯಲ್ಲಿ ಜಯ ಸಾಧಿಸಿ 2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ 6 ಜನ ಶಾಸಕರಲ್ಲಿ ಗುಧಾ ಕೂಡ ಒಬ್ಬರು. ಅಲ್ಲದೆ, 2020ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋತ್ ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದ ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ 18 ಕಾಂಗ್ರೆಸ್ ಶಾಸಕರಲ್ಲಿ ಒಬ್ಬರು.

2021ರ ನವೆಂಬರ್‌ನಲ್ಲಿ ಗುಧಾ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಬಿಜೆಪಿಯು ನಮ್ಮ ಶಾಸಕರಿಗೆ ಕೋಟ್ಯಾಂತರ ರೂಪಾಯಿಯ ಆಮಿಷವೊಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಕೂಡ ನಿರಂತರವಾಗಿ ಆರೋಪಿಸುತ್ತಲೇ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com