ಅಬಕಾರಿ ನೀತಿ ಅನುಷ್ಠಾನದಲ್ಲಿ ಲೋಪ; 11 ಅಧಿಕಾರಿಗಳನ್ನು ಅಮಾನತುಗೊಳಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿ ಗಂಭೀರ ಲೋಪ ಎಸಗಿರುವ ಆರೋಪದ ಮೇರೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿಯ ಅಂದಿನ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಮತ್ತು ಉಪ ಅಬಕಾರಿ ಆಯುಕ್ತ ಆನಂದ್ ಕುಮಾರ್ ತಿವಾರಿ ಸೇರಿದಂತೆ 11 ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ

ನವದೆಹಲಿ: ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿ ಗಂಭೀರ ಲೋಪ ಎಸಗಿರುವ ಆರೋಪದ ಮೇರೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿಯ ಅಂದಿನ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಮತ್ತು ಉಪ ಅಬಕಾರಿ ಆಯುಕ್ತ ಆನಂದ್ ಕುಮಾರ್ ತಿವಾರಿ ಸೇರಿದಂತೆ 11 ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

DANICSನ ಮೂವರು ತಾತ್ಕಾಲಿಕ ಅಧಿಕಾರಿಗಳು ಮತ್ತು ದೆಹಲಿ ಸರ್ಕಾರದ ಅಬಕಾರಿ ಇಲಾಖೆಯ ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಲೆಫ್ಟಿನೆಂಟ್ ಕಚೇರಿಯ ಮೂಲಗಳು ತಿಳಿಸಿವೆ.

ಆಯ್ದ ಮಾರಾಟಗಾರರಿಗೆ ಟೆಂಡರ್ ಅಂತಿಮಗೊಳಿಸುವ ಮತ್ತು ಟೆಂಡರ್ ನಂತರದ ಪ್ರಯೋಜನಗಳನ್ನು ವಿಸ್ತರಿಸುವಲ್ಲಿ ಅವ್ಯವಹಾರಗಳು ಸೇರಿದಂತೆ ಅಬಕಾರಿ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕಡೆಯಿಂದ ಆಗಿರುವ 'ಗಂಭೀರ ಲೋಪ' ವನ್ನು ಗಮನದಲ್ಲಿಟ್ಟುಕೊಂಡು, ವಿಜಿಲೆನ್ಸ್ ನಿರ್ದೇಶನಾಲಯ(ಡಿಒವಿ) ಸಲ್ಲಿಸಿರುವ ತನಿಖಾ ವರದಿಯ ಆಧಾರದ ಮೇಲೆ ಸಕ್ಸೇನಾ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

2021-22ರ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಎಲ್‌ಜಿ ಈಗಾಗಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಶಿಫಾರಸು ಮಾಡಿದೆ.

ನವೆಂಬರ್ 17, 2021 ರಂದು ಅಬಕಾರಿ ನೀತಿಯನ್ನು ಜಾರಿಗೆ ತರಲಾಗಿತ್ತು. ಈ ನೀತಿಯನ್ನು ಈಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ)ದ ಸರ್ಕಾರ ಹಿಂಪಡೆದಿದೆ.

ಮಾಜಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಸಿಸೋಡಿಯಾ ಕಿಡಿ

ಇಂದು ಮುಂಜಾನೆ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಅನಧಿಕೃತ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದರು ಮತ್ತು ಇದು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ಈ ಪ್ರಕರಣದ ವಿವರಗಳನ್ನು ಸಿಬಿಐಗೆ ಕಳುಹಿಸಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಸದ್ಯ ಬೈಜಾಲ್‌ನಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

'ಹೊಸ ಅಬಕಾರಿ ನೀತಿಯಡಿಯಲ್ಲಿ, ಅನಧಿಕೃತ ಪ್ರದೇಶಗಳನ್ನು ಒಳಗೊಂಡಂತೆ ದೆಹಲಿಯಾದ್ಯಂತ 849 ಅಂಗಡಿಗಳನ್ನು ತೆರೆಯಬೇಕಾಗಿತ್ತು. ಎಲ್‌ಜಿ ಈ ಪ್ರಸ್ತಾಪವನ್ನು ವಿರೋಧಿಸಲಿಲ್ಲ ಮತ್ತು ಅದನ್ನು ಅನುಮೋದಿಸಿತು' ಎಂದು ಸಿಸೋಡಿಯಾ ಹೇಳಿದರು.

ಆದಾಗ್ಯೂ, ಕಳೆದ ವರ್ಷ ನವೆಂಬರ್ 15 ರಂದು, ನೀತಿಯ ಅನುಷ್ಠಾನಕ್ಕೆ ಎರಡು ದಿನಗಳ ಮೊದಲು, ತನ್ನ ನಿಲುವನ್ನು ಬದಲಾಯಿಸಿದ ಎಲ್‌ಜಿ, ಅಂಗಡಿಗಳನ್ನು ತೆರೆಯಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅನುಮತಿ ಅಗತ್ಯವಿದೆ ಎಂಬ ಷರತ್ತನ್ನು ಪರಿಚಯಿಸಿದರು. ಎಲ್‌ಜಿಯ ಈ ನಿಲುವು ಬದಲಿಸಿದ ಪರಿಣಾಮವಾಗಿ, ಅನಧಿಕೃತ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲಾಗಲಿಲ್ಲ. ಇದು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯದ ನಷ್ಟಕ್ಕೆ ಕಾರಣವಾಯಿತು. ಮತ್ತೊಂದೆಡೆ, ತೆರೆದ ಅಂಗಡಿಗಳಲ್ಲಿ ಭಾರಿ ಆದಾಯಕ್ಕೆ ಸಾಕ್ಷಿಯಾಗಿದೆ' ಎಂದು ಅವರು ತಿಳಿಸಿದರು.  

ಅರವಿಂದ್ ಕೇಜ್ರಿವಾಲ್ ಸರ್ಕಾರವು ನವೆಂಬರ್ 17, 2021 ರಂದು ಜಾರಿಗೆ ತಂದ ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಿದಾಗ ಬೈಜಾಲ್ ದೆಹಲಿಯ ಎಲ್‌ಜಿ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com