ಸತತ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ: ಜೆಡಿಯುಗೆ ಎಡಪಕ್ಷಗಳ ಬೆಂಬಲ

ಹೊಸ ಮೈತ್ರಿ, ಆರ್ ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಜೊತೆ ಸಖ್ಯದಿಂದ ನಿತೀಶ್ ಕುಮಾರ್ ಅವರು ಇಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಸತತ 8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್
ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್

ಪಾಟ್ನಾ: ಹೊಸ ಮೈತ್ರಿ, ಆರ್ ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಜೊತೆ ಸಖ್ಯದಿಂದ ನಿತೀಶ್ ಕುಮಾರ್ ಅವರು ಇಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಸತತ 8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ರಾಜೀನಾಮೆ ನೀಡಿರುವ ನಿತೀಶ್ ಕುಮಾರ್ ಇದೀಗ ಆರ್ ಜೆಡಿ, ಜೆಡಿಯು, ಕಾಂಗ್ರೆಸ್ ಮತ್ತು ಇತರ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅದರ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.

ನಿನ್ನೆ ಇಡೀ ದಿನ ರಾಜಧಾನಿ ಪಾಟ್ನಾದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದರು. ಮೊದಲನೆಯದಾಗಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮತ್ತು ಎರಡನೇ ಬಾರಿ ಆರ್ ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನೊಳಗೊಂಡ ಏಳು ಪಕ್ಷಗಳ 164 ಶಾಸಕರ ಬೆಂಬಲದೊಂದಿಗೆ ನೂತನ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲು.

ತಮ್ಮ ಹೊಸ ಸರ್ಕಾರಕ್ಕೆ ಇರುವ ಶಾಸಕರ ಬೆಂಬಲ ಬಗ್ಗೆ ನಿತೀಶ್ ಕುಮಾರ್ ಅವರು ಹೊಸ ಪಟ್ಟಿಯನ್ನು ರಾಜ್ಯಪಾಲರ ಮುಂದಿಟ್ಟಿದ್ದಾರೆ. ಅದರಂತೆ ಇಂದು ನೂತನ ಮೈತ್ರಿ ಸರ್ಕಾರ ರಚಿಸಲು ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. 

ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮನೆಗೆ ಹೋದ ನಿತೀಶ್ ಕುಮಾರ್ ಅವರ ಮಗ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ನೂತನ ಸರ್ಕಾರ ರಚಿಸುವ ಸಂಬಂಧ ಚರ್ಚೆ ನಡೆಸಿದರು. ಕಾಂಗ್ರೆಸ್ ಮತ್ತು ಎಡ ಪಕ್ಷಗಳ ನಾಯಕರ ಜೊತೆ ಕೂಡ ಚರ್ಚೆ ನಡೆಸಿದರು. 

2017ರಲ್ಲಿ ಮಹಾಘಟಬಂಧನ ತೊರೆದಿದ್ದ ನಿತೀಶ್ ಕುಮಾರ್ ಎನ್ ಡಿಎ ಜೊತೆ ಮರು ಮೈತ್ರಿ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ 2013ರಲ್ಲಿ ಕೂಡ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾಗ ಅಸಮಾಧಾನಗೊಂಡು ನಿತೀಶ್ ಕುಮಾರ್ ಮೈತ್ರಿಯಿಂದ ಹೊರಬಂದಿದ್ದರು. ನಂತರ 2017ರಲ್ಲಿ ಮರು ಮೈತ್ರಿ ಮಾಡಿಕೊಂಡಿದ್ದರು. ಇದೀಗ ಎರಡನೇ ಬಾರಿ 9 ವರ್ಷಗಳ ನಂತರ ಮತ್ತೆ ಮೈತ್ರಿ ಮುರಿದುಕೊಂಡಿದ್ದಾರೆ. 

242 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಹೊಸ ಮೈತ್ರಿಕೂಟಕ್ಕೆ 121 ಶಾಸಕರ ಬೆಂಬಲ ಅಗತ್ಯವಿದೆ. ಆರ್‌ಜೆಡಿ ಅತಿ ಹೆಚ್ಚು 79 ಶಾಸಕರನ್ನು ಹೊಂದಿದೆ, ನಂತರ ಬಿಜೆಪಿ (77) ಮತ್ತು ಜೆಡಿಯು 44 ಶಾಸಕರನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ ನಾಲ್ಕು ಶಾಸಕರು ಮತ್ತು ಒಬ್ಬ ಸ್ವತಂತ್ರ ಶಾಸಕರ ಬೆಂಬಲವನ್ನು ಜೆಡಿಯು ಹೊಂದಿದೆ.

ಕಾಂಗ್ರೆಸ್ 19 ಶಾಸಕರನ್ನು ಹೊಂದಿದ್ದರೆ, ಸಿಪಿಐಎಂಎಲ್ (ಎಲ್) 12 ಮತ್ತು ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರನ್ನು ಹೊಂದಿದೆ. ಅಲ್ಲದೆ, ಒಬ್ಬ ಶಾಸಕ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಸೇರಿದವರಾಗಿದ್ದಾರೆ. 

ಬಿಹಾರದ ರಾಜಕೀಯ ಬೆಳವಣಿಗೆ ಮುಂದಿನ ಲೋಕಸಭೆ ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಪಿಐಎಂಎಲ್ (ಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಬಿಹಾರದಲ್ಲಿ ಹೊಸ ಮೈತ್ರಿಯಿಂದಾಗಿ, 40 ಸಂಸದರನ್ನು ಲೋಕಸಭೆಗೆ ಕಳುಹಿಸುವ ರಾಜ್ಯವು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ರಣರಂಗವಾಗಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ-ಜೆಡಿ(ಯು) ಮೈತ್ರಿಕೂಟ 40 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಗೆದ್ದಿತ್ತು.
ಬಿಜೆಪಿ ಯಾವಾಗಲೂ ತನ್ನ ಮಿತ್ರಪಕ್ಷಗಳ ಬಗ್ಗೆ ಮಂದ ದೃಷ್ಟಿಕೋನವನ್ನು ಹೊಂದಿದೆ ಎಂದು ಭಟ್ಟಾಚಾರ್ಯ ಹೇಳುತ್ತಾರೆ.

"ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ" ಎಂಬ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಇತ್ತೀಚಿನ ಹೇಳಿಕೆಯು ಪಕ್ಷದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಅವರು. ಬಿಜೆಪಿ ತನ್ನ ಎಲ್ಲಾ ಮಿತ್ರಪಕ್ಷಗಳನ್ನು ನಾಶ ಮಾಡಿದೆ ಎಂದು ಇತಿಹಾಸ ತೋರಿಸುತ್ತದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com