ಗುವಾಹಟಿ: ಅಸ್ಸಾಂನಲ್ಲಿ 55 ವರ್ಷದ ವ್ಯಕ್ತಿಯ ತಲೆ ಕಡಿದ ಯುವಕನೋರ್ವ ತಲೆಯೊಂದಿಗೆ ಸುಮಾರು 25 ಕಿ.ಮೀ ದೂರ ನಡೆದು ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಉತ್ತರ ಅಸ್ಸಾಂನ ಸೋನಿತ್ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆ ವ್ಯಾಪ್ತಿಯ ದೋಯಲ್ಪುರದಲ್ಲಿ ಕಳೆದ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ. ದೋಯಲ್ಪುರ ಅರುಣಾಚಲ ಪ್ರದೇಶದ ಗಡಿಗೆ ಸಮೀಪದಲ್ಲಿದೆ.
ಹತ್ಯೆ ಆರೋಪಿ 25 ವರ್ಷದ ಸುನಿರಾಮ್ ಮಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹತ್ಯೆಯಾದ ವ್ಯಕ್ತಿಯನ್ನು ಬೋಯಿಲಾ ಹೆಮ್ರಾಮ್ ಎಂದು ಗುರುತಿಸಲಾಗಿದೆ.
500 ರೂಪಾಯಿ ಸಾಲ ಕೊಡಲು ನಿರಾಕರಿಸಿದ್ದಕ್ಕೆ ಹೇಮ್ರಾಮ್ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು ಎಂದು ರಂಗಪಾರ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಇನ್ಸ್ಪೆಕ್ಟರ್ ದೇಬೆನ್ ಬೋರಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಫುಟ್ಬಾಲ್ ಪಂದ್ಯದಲ್ಲಿ ತಂಡವೊಂದು ಮೇಕೆಯನ್ನು ಗೆದ್ದಿತ್ತು. ಇನ್ನು ಮೇಕೆಯನ್ನು ಕಡಿಯುವ ಸ್ಥಳಕ್ಕೆ ಹೋಗುತ್ತಿದ್ದ ಸುನಿರಾಮ್ ಮಾದ್ರಿ ಮನೆ ಮುಂದೆ ಕುಳಿತ್ತಿದ್ದ ಬೋಯಿಲಾ ಹೆಮ್ರಾಮ್ ನೋಡಿದ್ದು ಆತನಿಂದ 500 ರುಪಾಯಿ ಸಾಲ ಕೊಡುವಂತೆ ಕೇಳದ್ದಾನೆ. ಹಣ ಕೊಡಲು ಹೆಮ್ರಾಮ್ ನಿರಾಕರಿಸಿದ್ದು ಇದರಿಂದ ಕೆರಳಿದ ಮಾದ್ರಿ ಈ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಡಿದ ತಲೆಯೊಂದಿಗೆ ಮಾದ್ರಿ ಮನೆಗೆ ಹೋಗಿದ್ದಾನೆ. ಈ ಭೀಭತ್ಸ್ಯ ದೃಶ್ಯವನ್ನು ಕಂಡ ಮಾದ್ರಿ ಸಹೋದರ ಆತನಿಗೆ ಹೊಡೆಯಲು ಮುಂದಾಗಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಬಂದ ಮಾದ್ರಿ ಸುಮಾರು 25 ಕಿ.ಮೀ ದೂರ ನಡೆದು ಮಧ್ಯರಾತ್ರಿ 1.30ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ವ್ಯಕ್ತಿಯ ತಲೆ ಹಾಗೂ ಕಡಿದ ಆಯುಧವನ್ನು ಕೊಟ್ಟು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement