ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ರಕ್ಷಣಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
'ಒಳನುಸುಳುವಿಕೆಗೆ ಯತ್ನಿಸಿದ ಸ್ಥಳದಲ್ಲಿ ಪರಿಶೀಲನೆ ಪ್ರಗತಿಯಲ್ಲಿದ್ದು, ಕ್ವಾಡ್ಕಾಪ್ಟರ್ ಮೂಲಕ ನಡೆಸಿದ ಪರಿಶೀಲನೆಯಲ್ಲಿ ನುಸುಳುಕೋರರ ಎರಡು ಮೃತ ದೇಹಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರದೇಶದಲ್ಲಿ ಮತ್ತಷ್ಟು ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಶಂಕಿತ ಭಯೋತ್ಪಾದಕರ ಗುಂಪು ಗಡಿಯಾಚೆಯಿಂದ ಕತ್ತಲೆಯ ಪ್ರದೇಶದ ಮೂಲಕ ನೌಶೇರಾದ ಲಾಮ್ನ ಪುಖಾರ್ನಿ ಗ್ರಾಮಕ್ಕೆ ನುಸುಳಲು ಪ್ರಯತ್ನಿಸಿದರು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಉಗ್ರನೊಬ್ಬ ನೆಲಬಾಂಬ್ ಇಟ್ಟಿದ್ದ ಮೇಲೆ ದಾಳಿ ನಡೆಸಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕರ ಚಲನವಲನವನ್ನು ಗಮನಿಸುತ್ತಿದ್ದ ಸೇನಾ ಪಡೆಗಳು ಮಂಗಳವಾರ ಬೆಳಗ್ಗೆಯಿಂದ ಸರ್ಪಗಾವಲು ಹಾಕಿದ್ದು, ಶೋಧ ಕಾರ್ಯ ಆರಂಭಿಸಿವೆ.
ಪಾಕಿಸ್ತಾನ ಸೇನೆಯ ಗುಪ್ತಚರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಮಾರ್ಗದರ್ಶಕನನ್ನು ಭಾನುವಾರ ಗಾಯಗೊಂಡ ಸ್ಥಿತಿಯಲ್ಲಿ ಬಂಧಿಸಿದ ಬೆನ್ನಲ್ಲೇ ನೌಶೇರಾ ಸೆಕ್ಟರ್ನಲ್ಲಿ ಒಳನುಸುಳುವಿಕೆಗೆ ಯತ್ನಿಸಲಾಗಿದೆ ಎನ್ನಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೊಟ್ಲಿಯ ಸಬ್ಜ್ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ (32) ಕಳೆದ ಆರು ವರ್ಷಗಳಲ್ಲಿ ಎರಡನೇ ಬಾರಿಗೆ ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ಈಮಧ್ಯೆ, ಮಂಗಳವಾರ ಪಂಜಾಬ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಸ್ತು ನಡೆಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್ಎಫ್) ವಶಪಡಿಸಿಕೊಂಡಿದ್ದು, ಇವುಗಳನ್ನು ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
Advertisement