'ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ.. ಆದರೆ ಮಾನವೀಯತೆ ತೋರಿದ್ದಾರೆ': ಮೋದಿ ಹೊಗಳಿ 'ಕೈ'ಗೆ ತಿವಿದ ಆಜಾದ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ.. ಆದರೆ ಅವರು ಮಾನವೀಯತೆ ತೋರಿದ್ದಾರೆ.. ಕಾಂಗ್ರೆಸ್ ನಲ್ಲಿ ಯಾರೂ ಪ್ರಶ್ನಿಸಬಾರದು, ಯಾರೂ ಸಲಹೆ ನೀಡಬಾರದು ಎಂದು ಭಾವಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಹಿರಿಯ ನಾಯಕ ಗುಲಾಂನಬಿ ಆಜಾದ್ ಹೇಳಿದ್ದಾರೆ.
ಗುಲಾಂನಬಿ ಆಜಾದ್
ಗುಲಾಂನಬಿ ಆಜಾದ್

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ.. ಆದರೆ ಅವರು ಮಾನವೀಯತೆ ತೋರಿದ್ದಾರೆ.. ಕಾಂಗ್ರೆಸ್ ನಲ್ಲಿ ಯಾರೂ ಪ್ರಶ್ನಿಸಬಾರದು, ಯಾರೂ ಸಲಹೆ ನೀಡಬಾರದು ಎಂದು ಭಾವಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಹಿರಿಯ ನಾಯಕ ಗುಲಾಂನಬಿ ಆಜಾದ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ತೊರೆದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಕಾಂಗ್ರೆಸ್ ಪಕ್ಷವನ್ನು ನೇರವಾಗಿಯೇ ಟೀಕಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ನಾನು ನರೇಂದ್ರ ಮೋದಿ ಅವರನ್ನು ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ. ಅವರಿಗೆ ಕುಟುಂಬವಿಲ್ಲ.. ಮಕ್ಕಳಿಲ್ಲ.. ಹೀಗಾಗಿ ಅವರೊಬ್ಬ ಒರಟು ಮನುಷ್ಯ ಎಂದು ಭಾವಿಸಿದ್ದೆ. ಆದರೆ ಅವರು ಮಾನವೀಯತೆ ತೋರಿದ್ದಾರೆ.. ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಬಸ್ಸಿನೊಳಗೆ ಉಗ್ರರು ಗ್ರೆನೇಡ್ ಸ್ಫೋಟಿಸಿದ್ದರು. ಈ ವೇಳೆ ಅಂದು ತುಂಬಾ ಸಾವುನೋವುಗಳಿಗೆ ಕಾರಣವಾಗಿತ್ತು. ಒಂದು ಮಟ್ಟಿಗೆ ದೇಹಗಳು ಛಿದ್ರವಾಗಿದ್ದವು. ಅಂದು ನಾನು ತುಂಬಾ ದುಃಖಿತನಾಗಿದ್ದೆ. ಈ ವೇಳೆ ಮೋದಿ ಸಾಹಬ್ - ಆ ಸಮಯದಲ್ಲಿ ಅವರು ಗುಜರಾತ್ ಸಿಎಂ ಆಗಿದ್ದರು. ಅವರು ನನಗೆ ಕರೆ ಮಾಡಿದರು. ಆದರೆ ನಾನು ಅಳುತ್ತಿದ್ದೆ. ನನಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಅಳುವುದನ್ನು ಅವರು ಕೇಳಿಸಿಕೊಂಡಿದ್ದರು ಎಂದು ಆಜಾದ್ ಸುದ್ದಿಗಾರರಿಗೆ ತಿಳಿಸಿದರು.

ಅಂದು ನಾನು ಮೋದಿ ಅವರಿಗೆ, 'ನನಗೆ ಎರಡು ವಿಮಾನಗಳು ಬೇಕು.. ಒಂದು ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲು ಮತ್ತು ಮತ್ತೊಂದು ಸತ್ತವರಿಗೆ ಎಂದು ಹೇಳಿದ್ದೆ. ನಂತರ, ನಾನು ಗಾಯಗೊಂಡವರನ್ನು ನೋಡಲು ಹೋದಾಗ ಸಂತ್ರಸ್ತರನ್ನು ಭೇಟಿಯಾದಾಗ,  ಸಂತ್ರಸ್ಥರು ತಮ್ಮ ನೋವನ್ನು ನನ್ನೊಂದಿಗೆ ಹಂಚಿಕೊಂಡರು, ಆಗ ನಾನು ಮತ್ತೊಮ್ಮೆ ಅಳುತ್ತಿದ್ದೆ. ಅದು ಟಿವಿ ಸುದ್ದಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಇದನ್ನು ನೋಡಿದ ಮೋದಿ ಮತ್ತೆ ನನಗೆ ಕರೆ ಮಾಡಿ ಸಂತೈಸಿದ್ದರು ಎಂದು ಆಜಾದ್ ಹೇಳಿದರು.

ಕಳೆದ ಐದು ದಶಕಗಳಲ್ಲಿ ಕಾಂಗ್ರೆಸ್ ಜೊತೆಗಿನ ಅವರ ಪ್ರಯಾಣದ ಬಗ್ಗೆ ಮಾತನಾಡಿದ ಆಜಾದ್, 'ಮೋದಿ ಜೀ ಕ್ಷಮಿಸಿ, ಜಿ -23 ಪತ್ರವನ್ನು ಬರೆದಾಗಿನಿಂದ ಅವರು (ಕಾಂಗ್ರೆಸ್) ನನ್ನೊಂದಿಗೆ ಸಮಸ್ಯೆ ಹೊಂದಿದ್ದಾರೆ. ಯಾರೂ ತಮಗೆ ಪತ್ರ ಬರೆಯಬೇಕು, ಪ್ರಶ್ನಿಸಬೇಕು ಎಂದು ಅವರು ಬಯಸಲಿಲ್ಲ... ಹಲವಾರು (ಕಾಂಗ್ರೆಸ್) ಸಭೆಗಳು ನಡೆದಿವೆ. ಆದರೆ ಸಭೆಯಲ್ಲಿ ಮಂಡಿಸಿದ ಒಂದೇ ಒಂದು ಸಲಹೆಯನ್ನು ಸಹ ಸ್ವೀಕರಿಸಲಾಗಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸೇರ್ಪಡೆ ಕುರಿತು ಆಜಾದ್ ಹೇಳಿದ್ದು..
ಇದೇ ವೇಳೆ, ಹೊಸ ಪಕ್ಷ ಕಟ್ಟುವ ಉಹಾಪೋಹಗಳಿದ್ದು, ಅದರ ಜೊತೆಯೇ ಬಿಜೆಪಿ ಸೇರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಜಾದ್, 'ಕಾಂಗ್ರೆಸ್‌ನಲ್ಲಿ ಅನಕ್ಷರಸ್ಥರು ಇದ್ದಾರೆ ನೋಡಿ. ನನ್ನ ಮತದ ನೆಲೆಯಿಂದ ಬಿಜೆಪಿಗೆ ಲಾಭವಾಗುವುದಿಲ್ಲ, ಕಠಿಣವಾದರೂ ಇದು ನಿಜ.. ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ಅರ್ಥಮಾಡಿಕೊಂಡಿರುವ ಜನರಿಗೆ ಇದು ಚೆನ್ನಾಗಿ ತಿಳಿದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂದರು. ಅಂತೆಯೇ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಇರಬಹುದೇ? ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ನುಡಿದ ಅಜಾದ್ "ನನ್ನದು ಒಂದೇ ಪಕ್ಷವಲ್ಲ... ಬೇರೆ ಪಕ್ಷಗಳೂ ಇವೆ" ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ ಆಜಾದ್ ಅವರು ದಶಕಗಳ ಕಾಲ ತಾವು ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದು, ರಾಜಿನಾಮೆ ಪತ್ರದಲ್ಲಿ  ಆಜಾದ್ ರಾಹುಲ್ ಗಾಂಧಿ ಅವರ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,  ಇದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಈ ಹಿಂದೆ ಆಜಾದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಅವರಿಗೆ ಪತ್ರ ಬರೆದಿದ್ದರು. ಪಕ್ಷದೊಳಗೆ ಅಗತ್ಯ ಸುಧಾರಣೆಗಳ ಬಗ್ಗೆ ಈ G-23 ನಾಯಕರ ಗುಂಪು ಸಲಹೆ ನೀಡಿತ್ತು. ಆದರೆ ಈ ಪತ್ರ ಕಾಂಗ್ರೆಸ್ ನಲ್ಲಿ ವ್ಯಾಪಕ ಹೈಡ್ರಾಮಾವನ್ನೇ ಸೃಷ್ಚಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com