ತೆಲಂಗಾಣ: ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು; ಮೊದಲ ಬಾರಿಗೆ ಸರ್ಕಾರಿ ವೈದ್ಯರಾಗಿ ನೇಮಕ!

ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಮಂಗಳಮುಖಿಯರು ಇದೀಗ ದೇಶದಲ್ಲಿ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ.
ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು
ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು

ಹೈದರಾಬಾದ್: ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಮಂಗಳಮುಖಿಯರು ಇದೀಗ ದೇಶದಲ್ಲಿ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ಹೌದು.. ಇದೇ ಮೊದಲ ಬಾರಿಗೆ ಮಂಗಳಮುಖಿಯರಿಬ್ಬರು ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗಿ ನೇಮಕವಾಗಿದ್ದು, ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾಥೋಡ್ ಹಾಗೂ ರುತ್ ಜಾನ್ ಪೌಲ್ ಅವರು ಸರ್ಕಾರಿ ವೈದ್ಯರಾಗಿ ಅಧಿಕೃತವಾಗಿ ನೇಮಕವಾಗಿದ್ದಾರೆ. ಆ ಮೂಲಕ ಇಂತಹುದೊಂದು ಅಪರೂಪದ ಸಾಧನೆ ಮಾಡಿದ ದೇಶದ ಮೊದಲ ಮಂಗಳಮುಖಿಯರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2015 ರಲ್ಲಿ ಈ ಲೈಂಗಿಕ ಅಲ್ಪಸಂಖ್ಯಾತರು ಎಂಬಿಬಿಎಸ್ ಪದವಿ ಮುಗಿಸಿದ್ದರು. ನಂತರ ಕೆಲ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಇವರ ಸೇವೆ ಪಡೆಯಲು ಅನೇಕ ಆಸ್ಪತ್ರೆಗಳು ಹಾಗೂ ರೋಗಿಗಳು ಮುಂದೆ ಬರುತ್ತಿರಲಿಲ್ಲ. ಪ್ರಾಚಿ ರಾತೋಡ್ ಅವರ ಲಿಂಗ ವಿಚಾರವಾಗಿ ಅವರು ಸೇವೆ ಸಲ್ಲಿಸುತ್ತಿದ್ದ ಒಂದು ದೊಡ್ಡ ಖಾಸಗಿ ಆಸ್ಪತ್ರೆಯಿಂದ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. 

ಇದೀಗ ಈ ಇಬ್ಬರೂ ಮಂಗಳಮುಖಿಯರನ್ನು ತೆಲಂಗಾಣದ ಸರ್ಕಾರಿ ಆಸ್ಪತ್ರೆಯಾಗಿರುವ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಸೇವೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಹೆಮ್ಮೆಯಿಂದ ಮಾತನಾಡಿರುವ ಪ್ರಾಚಿ ರಾಥೋಡ್, ಲಿಂಗದ ಕಾರಣಕ್ಕಾಗಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ಬಾಲ್ಯದಿಂದಲೂ ಸಹಿಸಬೇಕಾಗಿದ್ದ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ಮೆಲುಕು ಹಾಕಿದರು.

"ನಿಮ್ಮ ಎಲ್ಲಾ ಸಾಧನೆಗಳ ಹೊರತಾಗಿಯೂ ಕಳಂಕ ಮತ್ತು ತಾರತಮ್ಯ ಎಂದಿಗೂ ಹೋಗುವುದಿಲ್ಲ.. ರಾಥೋಡ್ ಹೇಳಿದ್ದಾರೆ. ಇದೇ ರಾಥೋಡ್ ಆದಿಲಾಬಾದ್‌ನ ವೈದ್ಯಕೀಯ ಕಾಲೇಜಿನಲ್ಲಿ 2015 ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಬಳಿಕ ರಾಥೋಡ್ ಅವರು ಸ್ನಾತಕೋತ್ತರ ಪದವಿ ಪಡೆಯಲು ದೆಹಲಿಗೆ ಹೋಗಿದ್ದರು.. ಆದರೆ ಪ್ರತಿಕೂಲ ವಾತಾವರಣದಿಂದಾಗಿ ಹೈದರಾಬಾದ್‌ಗೆ ಹಿಂತಿರುಗಬೇಕಾಯಿತು. ಆದರೆ, ರಾಥೋಡ್ ಇಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ತುರ್ತು ಔಷಧದಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ಬಳಿಕ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಯೊಂದು ಇವರ ರಕ್ಷಣೆಗೆ ನಿಂತಿತು ಮತ್ತು ರಾಥೋಡ್ ಎನ್‌ಜಿಒ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಕೆಲಸ ಮಾಡಿದರು ಮತ್ತು ನಂತರ ಒಜಿಎಚ್‌ನಲ್ಲಿ ಕೆಲಸ ಪಡೆದಿದದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com