ನಿವೃತ್ತಿಯ ನಂತರ ವ್ಯವಸ್ಥೆಯನ್ನು ಟೀಕಿಸುವುದು ಕೆಲವರಿಗೆ ಫ್ಯಾಶನ್ ಆಗಿದೆ: ಕೊಲಿಜಿಯಂ ಮಾಜಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ವ್ಯವಸ್ಥೆಯನ್ನು ಟೀಕಿಸುವ ಕೆಲವು ಮಾಜಿ ಕೊಲಿಜಿಯಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ನಿವೃತ್ತಿಯ ನಂತರ ಈ ರೀತಿ ಟೀಕಿಸುವುದು ಇತ್ತೀಚೆಗೆ ಫ್ಯಾಶನ್ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ವ್ಯವಸ್ಥೆಯನ್ನು ಟೀಕಿಸುವ ಕೆಲವು ಮಾಜಿ ಕೊಲಿಜಿಯಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ನಿವೃತ್ತಿಯ ನಂತರ ಈ ರೀತಿ ಟೀಕಿಸುವುದು ಇತ್ತೀಚೆಗೆ ಫ್ಯಾಶನ್ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂನ ಭಾಗವಾಗಿರುವ ನ್ಯಾಯಮೂರ್ತಿ ಎಂ ಆರ್ ಷಾ ಅವರು, ಕೊಲಿಜಿಯಂ ಮಾಜಿ ಸದಸ್ಯರು ನೀಡಿದ ಹೇಳಿಕೆಗೆ ನಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಹಿಂದಿನ ಸದಸ್ಯರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸುವುದು ಒಂದು ಫ್ಯಾಶನ್ ಆಗಿದೆ ಎಂದರು.

ಆರ್‌ಟಿಐ ಕಾಯ್ದೆಯಡಿ 2018ರ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯ ಕಾರ್ಯಸೂಚಿ, ಎಷ್ಟು ನಿಮಿಷಗಳ ಕಾಲ ಸಭೆ ನಡೆದಿತ್ತು ಮತ್ತು ನಿರ್ಣಯವನ್ನು ಕೋರಿದ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರ ಮನವಿಯನ್ನು ಪರಿಗಣಿಸುವಾಗ ನ್ಯಾಯಪೀಠವು ನಿನ್ನೆ ಈ ರೀತಿ ಹೇಳಿದೆ. 2019 ರ ಕೊನೆಯಲ್ಲಿ ಸುಪ್ರೀಂ ಕೋರ್ಟ್ ಆರ್ ಟಿಐ ಕಾಯ್ದೆಯಡಿಗೆ ಬಂದಿತ್ತು.

ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಆತ್ಮಚರಿತ್ರ 'ಜಸ್ಟಿಸ್ ಫಾರ್ ದಿ ಜಡ್ಜ್' ನಲ್ಲಿ, ಕೊಲಿಜಿಯಂ ತನ್ನ ಡಿಸೆಂಬರ್ 2018 ರ ಸಭೆಯಲ್ಲಿ ಆಗ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಪ್ರದೀಪ್ ನಂದಜೋಗ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ಗೆ ಉನ್ನತೀಕರಣಕ್ಕಾಗಿ ಶಿಫಾರಸು ಮಾಡಲು ಒಪ್ಪಿಕೊಂಡಿತ್ತು. ಆದರೆ ಅವರ ಉನ್ನತಿಯ ಸುದ್ದಿ ಮಾಧ್ಯಮಗಳಿಗೆ ಸೋರಿಕೆಯಾದಾಗಿನಿಂದ ನಿರ್ಧಾರವನ್ನು ಸ್ಥಗಿತಗೊಳಿಸಲಾಯಿತು.

ಸಿಜೆಐ ಗೊಗೊಯ್ ಅವರನ್ನು ಹೊರತುಪಡಿಸಿ, ಆಗಿನ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಎ ಕೆ ಸಿಕ್ರಿ, ಎಸ್ ಎ ಬೋಬ್ಡೆ ಮತ್ತು ಎನ್ ವಿ ರಮಣ ಇತರ ಸದಸ್ಯರಾಗಿದ್ದರು. ಜನವರಿ 10, 2019 ರಂದು ಮುಂದಿನ ಕೊಲಿಜಿಯಂ ಸಭೆಯ ನಿರ್ಣಯದಲ್ಲಿ, ಡಿಸೆಂಬರ್ 12, 2018 ರಂದು ತೆಗೆದುಕೊಂಡ ನಿರ್ಧಾರಗಳನ್ನು ಮರುಪರಿಶೀಲಿಸಲಾಗಿತ್ತು. 

ಫೆಬ್ರವರಿ 2019 ರಲ್ಲಿ, ಆರ್ ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಎಸ್‌ಸಿ ಕೊಲಿಜಿಯಂನ ಡಿಸೆಂಬರ್, 2018 ರ ಸಭೆಯ ನಿರ್ಣಯದ ನಡಾವಳಿಯ ಪ್ರತಿಯನ್ನು ಕೋರಿ ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮನವಿಯನ್ನು ವಜಾಗೊಳಿಸಿದಾಗ, ಮೊದಲ ಮೇಲ್ಮನವಿ ಪ್ರಾಧಿಕಾರವು ಜನವರಿ 10, 2019 ರ ಕೊಲಿಜಿಯಂ ನಿರ್ಣಯವು ಡಿಸೆಂಬರ್ ಸಭೆಯಲ್ಲಿ ಸಮಾಲೋಚನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಔಪಚಾರಿಕವಾಗಿ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿತು. ಆಗ ಅಂಜಲಿ ಭಾರದ್ವಾಜ್ ಅವರು ಕೇಂದ್ರ ಮಾಹಿತಿ ಆಯೋಗ ಮತ್ತು ದೆಹಲಿ ಹೈಕೋರ್ಟ್‌ ಮೊರೆ ಹೋದರು. ಅರ್ಜಿಯ ವಿಚಾರಣೆ ನಡೆಸಿದ ಪೀಠ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ನಿರಾಶೆ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಲೋಕೂರ್: ನಿವೃತ್ತಿಯ ನಂತರ, ನ್ಯಾಯಮೂರ್ತಿ ಲೋಕುರ್ ಅವರು ಮಾಧ್ಯಮ ಸಂದರ್ಶನದಲ್ಲಿ, ಸುಪ್ರೀಂಕೋರ್ಟ್ ಡಿಸೆಂಬರ್ 2018ರ ಕೊಲಿಜಿಯಂ ನಿರ್ಣಯವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡದಿರುವ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದರು. ದೆಹಲಿ ಹೈಕೋರ್ಟ್ ಅದನ್ನು ಪರಿಗಣಿಸಲು ನಿರಾಕರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com