ಲಖನೌ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬೆಡಗು ಬಿನ್ನಾಣ ಪ್ರದರ್ಶಿಸಲು ಅಮೇಥಿಗೆ ಬರುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಜಯ್ ರೈ ಅವರ ವಿರುದ್ಧ ಸೋನಭದ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸ್ಮೃತಿ ಇರಾನಿ ಅವರು ತಮ್ಮ ಕ್ಷೇತ್ರವಾದ ಅಮೇಥಿಗೆ "ಲಟ್ಕಾ, ಜಟ್ಕಾ"(ಬೆಡಗು ಬಿನ್ನಾಣ) ತೋರಿಸಲು ಮಾತ್ರ ಬರುತ್ತಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಸೋಮವಾರ ವ್ಯಂಗ್ಯವಾಡಿದ್ದರು. ಇದಕ್ಕೆ ಭಾರತೀಯ ಜನತಾ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಬಿಜೆಪಿಯ ಮಹಿಳಾ ಮೋರ್ಚಾದ ಸೋನ್ಭದ್ರಾ ಪುಷ್ಪಾ ಸಿಂಗ್ ಅವರು ರಾಬರ್ಟ್ಸ್ಗಂಜ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಅಜಯ್ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 354(ಎ) (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ), 501 (ಮಾನಹಾನಿಕರ ಹೇಳಿಕೆ), ಮತ್ತು 509 (ಮಹಿಳೆಯರಿಗೆ ಅವಮಾನ ಮಾಡುವ ಉದ್ದೇಶದಿಂದ ಪದ ಬಳಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಮತ್ತೆ ಅಮೇಥಿಯಿಂದ ಸ್ಪರ್ಧಿಸುತ್ತಾರೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ರೈ, "ಇದು ಗಾಂಧಿ ಕುಟುಂಬದ ಕ್ಷೇತ್ರವಾಗಿದೆ. ರಾಹುಲ್ ಜಿ ಇಲ್ಲಿಂದ ಲೋಕಸಭೆ ಸಂಸದರಾಗಿದ್ದಾರೆ, ಹಾಗೆಯೇ ರಾಜೀವ್(ಗಾಂಧಿ) ಮತ್ತು ಸಂಜಯ್ ಗಾಂಧಿ ಕೂಡ ಸಂಸದರಾಗಿದ್ದಾರೆ ಎಂದರು.
Advertisement