ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಎಸ್ಪಿ ವರಿಷ್ಠೆ ಮಾಯಾವತಿ ಮತ್ತು ಆರ್ಎಲ್ಡಿಯ ಜಯಂತ್ ಚೌಧರಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಹಲವು ನಾಯಕರಿಗೆ ಉತ್ತರ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಆಹ್ವಾನಿಸಿದೆ.
ಲಖನೌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಯಾತ್ರೆಗೆ ಆಹ್ವಾನಿಸಲಾಗಿದೆ. ಅಲ್ಲದೆ ವಿವಿಯ ಮತ್ತೊಬ್ಬ ಪ್ರಾಧ್ಯಾಪಕ ರವಿಕಾಂತ್ ಅವರಿಗೂ ಆಹ್ವಾನ ನೀಡಲಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 3 ರಂದು ಗಾಜಿಯಾಬಾದ್ನ ಲೋನಿ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ನಂತರ ಅದು ಬಾಗ್ಪತ್ ಮತ್ತು ಶಾಮ್ಲಿ ಮೂಲಕ ಹರಿಯಾಣವನ್ನು ಪ್ರವೇಶಿಸುತ್ತದೆ.
ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಉತ್ತರ ಪ್ರದೇಶ ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಪಕ್ಷ ಆಹ್ವಾನ ನೀಡಿದೆ ಎಂದು ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲದ ಪ್ರಸ್ತುತ ದಿನಗಳಲ್ಲಿ, ಜನರ ಮನಸ್ಸನ್ನು ತಿಳಿದುಕೊಳ್ಳಲು ಈ ಯಾತ್ರೆ ಏಕೈಕ ಆಯ್ಕೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಎಲ್ಲಾ ವಿಪಕ್ಷಗಳು ಯೋಗಿ ಸರ್ಕಾರದ ಬಗ್ಗೆ ಬಹುತೇಕ ಒಂದೇ ಅಭಿಪ್ರಾಯವನ್ನು ಹೊಂದಿರುವುದರಿಂದ ಯಾತ್ರೆಯಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
Advertisement