ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ವಿಧಾನಪರಿಷತ್ ನಲ್ಲಿ ಇಂದು ಗಡಿ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಗಡಿ ವಿಷಯವನ್ನು ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ-ಮಹಾರಾಷ್ಟ್ರದ ನಡುವಿನ ವಿವಾದದ ಪ್ರಕರಣ ಕೇವಲ ಭಾಷೆ ಅಥವಾ ಗಡಿಯ ವಿಷಯವಷ್ಟೇ ಅಲ್ಲದೇ ಅದು ಮಾನವಿಯತೆಯ ವಿಷಯವೂ ಆಗಿದೆ ಎಂದು ಹೇಳಿದ್ದಾರೆ.
ಪೀಳಿಗೆಗಳಿಂದ ಗಡಿ ಭಾಗದ ಗ್ರಾಮಗಳಲ್ಲಿ ವಾಸಿಸುತ್ತಿರುವ ಮರಾಠಿ ಭಾಷಿಕರಿಗೆ ತಮ್ಮ ದೈನಂದಿನ ಜೀವನ, ಭಾಷೆ, ಜೀವನ ಶೈಲಿ ಎಲ್ಲವೂ ಮರಾಠಿಯಾಗಿದೆ ಎಂದು ಹೇಳಿದ್ದಾರೆ.
ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವವರೆಗೂ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶಗಳನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಠಾಕ್ರೆ ಆಗ್ರಹಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನೂ ಪ್ರಶ್ನಿಸಿರುವ ಠಾಕ್ರೆ, ವಿವಾದದ ಬಗ್ಗೆ ಶಿಂಧೆ ಒಂದೇ ಒಂದು ಮಾತನ್ನಾದರೂ ಆಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ ಹಾಗೂ ಸರ್ಕಾರದ ನಿಲುವನ್ನು ಪ್ರಕಟಿಸಲು ಒತ್ತಾಯಿಸಿದ್ದಾರೆ.
Advertisement