ಧಾರವಾಡ: ಹಾವಿಗೆ ಶಸ್ತ್ರ ಚಿಕಿತ್ಸೆ ನಡೆದಿರುವ ಅಪರೂಪದ ಘಟನೆ ಧಾರವಾಡದಲ್ಲಿ ವರದಿಯಾಗಿದ್ದು, ಕ್ಯಾನ್ಸರ್ ಕಾರಕ ಗೆಡ್ಡೆಯನ್ನು ಹೊರತೆಗೆಯಲಾಗಿದೆ.
ಹಿರಿಯ ಪ್ರಾಣಿ ವೈದ್ಯ ಡಾ. ಅನಿಲ್ ಕುಮಾರ ಪಾಟೀಲ್ ಅವರು ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಉರಗ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಅವರು ಹಾವೊಂದನ್ನು ರಕ್ಷಿಸಿದ್ದರು. ಗೆಡ್ಡೆ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ವೈದ್ಯರ ಬಳಿ ಕರೆತಂದಿದ್ದರು.
ಮನೆಯೊಂದರಲ್ಲಿ ಹಾವು ಸೇರಿಕೊಂಡಿರುವ ಬಗ್ಗೆ ತಮಗೆ ಕರೆ ಬಂದಿತ್ತು. ವಿಷಕಾರಿಯಲ್ಲದ ಟ್ರಿಂಕೆಟ್ ಹಾವನ್ನು ತಕ್ಷಣವೇ ರಕ್ಷಿಸಲಾಯಿತು, ಆ ಹಾವಿನ ತಲೆಯಲ್ಲಿ ಗೆಡ್ಡೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಡಾ. ಅನಿಲ್ ಕುಮಾರ್ ಪಾಟೀಲ್ ಅವರ ಬಳಿ ಕರೆದೊಯ್ಯಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಲು ನಿರ್ಧರಿಸಿದರು.
ಡಾ. ಅನಿಲ್ ಕುಮಾರ ಪಾಟೀಲ್ ಅವರ ಮಾಹಿತಿಯ ಪ್ರಕಾರ ಹಾವುಗಳು ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಸವಾಲಿನ ವಿಷಯವಾಗಿದೆ. ಈ ಹಾವಿಗೆ ತಲೆ ಹಾಗು ಕಣ್ಣಿನ ಭಾಗದಲ್ಲಿ ಗೆಡ್ಡೆ ಬೆಳವಣಿಗೆಯಾಗಿತ್ತು. ಇದನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆ ಸುಮಾರು ಒಂದು ಗಂಟೆ 30 ನಿಮಿಷಗಳ ಕಾಲ ನಡೆದಿದೆ.
ಇದು ಅತ್ಯಂತ ಅಪಾಯ ಹೊಂದಿದ್ದ ಶಸ್ತ್ರಚಿಕಿತ್ಸೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಹಾವನ್ನು ಸೋಮಶೇಖರ್ ಅವರ ಬಳಿಯೇ ಇಟ್ಟುಕೊಂಡು ಆರೈಕೆ ಮಾಡಲು ತಿಳಿಸಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಹಾವಿಗೆ ಇನ್ನೂ 2 ದಿನಗಳ ಕಾಲ ಡ್ರೆಸ್ಸಿಂಗ್ ಅಗತ್ಯವಿದ್ದು, ಆ ಗೆಡ್ಡೆ ಇದ್ದ ಭಾಗದಲ್ಲಿ ಮತ್ತೆ ಟ್ಯೂಮರ್ ಬೆಳವಣಿಗೆಯಾವುದೋ ಇಲ್ಲವೋ ಎಂಬುದನ್ನೂ ಗಮನಿಸಬೇಕಿದೆ ಎನ್ನುತ್ತಾರೆ ವೈದ್ಯರು
Advertisement