ಕುಲು: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಾರ್ವತಿ ಕಣಿವೆಯ ಚೋಜ್ ನುಲ್ಲಾದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಹಲವಾರು ಜನರು ಕೊಚ್ಚಿಹೋಗಿದ್ದಾರೆ. ಈ ಘಟನೆಯು ಆಸ್ತಿಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡಿದೆ ಮತ್ತು ಗ್ರಾಮಕ್ಕೆ ಹೋಗುವ ಪಾರ್ವತಿ ನದಿಗೆ ಅಡ್ಡಲಾಗಿರುವ ಏಕೈಕ ಸೇತುವೆಯನ್ನು ಸಹ ನಾಶಪಡಿಸಿದೆ.
ಭಾರೀ ಮಳೆಯಿಂದಾಗಿ ಕುಲು ಜಿಲ್ಲೆಯ ಮಣಿಕರನ್ ಕಣಿವೆಯಲ್ಲಿ ಪ್ರವಾಹ ಅಪ್ಪಳಿಸಿತು, ಚೋಜ್ ಗ್ರಾಮದಲ್ಲಿ ಡಜನ್ ಗಟ್ಟಲೆ ಮನೆಗಳು ಮತ್ತು ಕ್ಯಾಂಪಿಂಗ್ ಸೈಟ್ಗಳಿಗೆ ಹಾನಿಯಾಗಿದೆ ಎಂದು ಕುಲು ಪೊಲೀಸ್ ಅಧೀಕ್ಷಕ ಗುರುದೇವ್ ಶರ್ಮಾ ಹೇಳಿದ್ದಾರೆ.
ಪ್ರವಾಹದಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿವೆ ಎಂದು ತಿಳಿಸಿದ್ದಾರೆ. ಚೋಜ್ ಗ್ರಾಮದಲ್ಲಿ, 4ರಿಂದ 6 ವ್ಯಕ್ತಿಗಳು ಮತ್ತು 5 ಜಾನುವಾರುಗಳು ಕೊಚ್ಚಿಹೋಗಿವೆ. ಕಸೋಲ್-ಜೈಮಾಲಾ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ತಿಳಿಸಿದೆ.
ಕುಲುವಿನ ಮಲಾನಾ ಪ್ರಾಜೆಕ್ಟ್ ಮತ್ತು ತಹಸಿಲ್ ಭುಂತರ್ನಲ್ಲಿ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆಯಲ್ಲಿ 25 ರಿಂದ 30 ನೌಕರರು ಸಿಲುಕಿಕೊಂಡಿದ್ದರು. ಇದೀಗ ಅವರನ್ನು ರಕ್ಷಿಸಲಾಗಿದೆ. ಎಸ್ಡಿಎಂ ಕುಲು, ಪೊಲೀಸರು ಮತ್ತು ಅಗ್ನಿಶಾಮಕ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ನಿನ್ನೆ ತಡರಾತ್ರಿಯಿಂದ ಶಿಮ್ಲಾದಲ್ಲಿ ನಿರಂತರ ಭಾರೀ ಮಳೆ ಮುಂದುವರಿದಿದೆ.
Advertisement