ಸಂವಿಧಾನ ವಿರೋಧಿ ಹೇಳಿಕೆ: ಕೇರಳ ಸಚಿವ ಸಾಜಿ ಚೆರಿಯನ್ ರಾಜೀನಾಮೆ
ತಿರುವನಂತಪುರಂ: ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶ್ರೀಸಾಮಾನ್ಯರನ್ನು ಶೋಷಣೆ ಮಾಡುವುದೇ ಸಂವಿಧಾನದ ಗುರಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಜಿ ಚೆರಿಯನ್ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದಂತೆ ಸಿಪಿಐಎಂ ಹಿರಿಯ ನಾಯಕ ಪಿಣರಾಯಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ನಾಯಕತ್ವದ ನಿರ್ದೇಶನದ ಮೇರೆಗೆ ಪಕ್ಷದ ನಾಯಕತ್ವ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸೂಚನೆಯಂತೆ ಸಾಜಿ ಚೆರಿಯನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಾಜಿ ಚೆರಿಯನ್ ಅವರು, ಇದು ನನ್ನ ವೈಯುಕ್ತಿ ನಿರ್ಧಾರವಾಗಿದೆ. ಸಂವಿಧಾನವನ್ನು ಗೇಲಿ ಮಾಡುವುದಾಗಲಿ, ಅವಹೇಳನ ಮಾಡುವುದಾಗಲಿ ನನ್ನ ಉದ್ದೇಶ ಆಗಿರಲಿಲ್ಲ. ಭಾರತದ ಸಂವಿಧಾನ ಬಗ್ಗೆ ಅಪಾರ ಗೌರವವಿದೆ ಎಂದು ಸಾಜಿ ಚೆರಿಯನ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಾಜಿ, ಭಾರತೀಯ ಸಂವಿಧಾನದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಸಡಿಲವಾಗಿ ವಿವರಿಸಲಾಗಿದೆ. ಭಾರತೀಯ ಸಂವಿಧಾನವು ಕಾರ್ಮಿಕರ ಶೋಷಣೆಗೆ ಸಹಾಯ ಮಾಡಿದೆ ಮತ್ತು ದೇಶದಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಎಂದು ಹೇಳಿದ್ದರು.