ಶಿವಪುರಿ: ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಹಣಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಬಾಡಿಗೆ ಹಂತಕನೊಬ್ಬನನ್ನು ನೇಮಿಸಿ 59 ವರ್ಷದ ತನ್ನ ತಂದೆಯನ್ನೇ ಕೊಲ್ಲಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮಹೇಶ್ ಗುಪ್ತಾ ಕೊಲೆಯಾದವರು.
ಮಹೇಶ್ ಗುಪ್ತಾ ಅವರು ಪಿಚ್ ಹೋರ್ ಪಟ್ಟಣದಲ್ಲಿನ ತನ್ನ ಮನೆಯಲ್ಲಿ ಮಲಗಿರುವಾಗ ಜುಲೈ 21-22ರ ಮಧ್ಯರಾತ್ರಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಾಂದೆಲ್ ಹೇಳಿದ್ದಾರೆ. ಈ ಕೇಸ್ ಸಂಬಂಧ ಬಿಹಾರದಿಂದ ಬಂದಿದ್ದ ಹಂತಕ ಅಜಿತ್ ಸಿಂಗ್, ಗುಪ್ತಾ ಅವರ ಮಗ ಅಂಕಿತ್ (32) ಮತ್ತು ಆತನ ಸ್ನೇಹಿತ ನಿತಿನ್ ಲೊಧಿ ಎಂಬುವರನ್ನು ಪೊಲೀಸರು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅಂಕಿತ್ ಮನೆಯ ನೆಲ ಮಹಡಿಯಲ್ಲಿ ಮಲಗಿದ್ದು, ಅವರ ತಂದೆ ಮೂರನೇ ಮಹಡಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿರುವುದರ ಹಿಂದೆ ಗುಪ್ತಾ ಅವರ ಪುತ್ರನ ಕೈವಾಡದ ಬಗ್ಗೆ ಶಂಕೆಯಿತ್ತು. ಅಂಕಿತ್ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಗೆ ಬಂದಿತು. ಅಂಕಿತ್ ಮದ್ಯ ವ್ಯಸನಿಯಾಗಿದ್ದು, ಜೂಜಾಟ ಮತ್ತಿತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ತನ್ನ ಅಪ್ಪ ಹಣ ನೀಡುತ್ತಿರಲಿಲ್ಲ. ಇದಕ್ಕಾಗಿ ಕೋಪಗೊಂಡಿದ್ದ ಅಂಕಿತ್, ಆನ್ ಲೈನ್ ನಲ್ಲಿ ಶೋಧ ನಡೆಸಿ, ತನ್ನ ತಂದೆಯ ಕಿಡ್ನಾಪ್ ಮತ್ತು ಹತ್ಯೆಗಾಗಿ 1 ಲಕ್ಷ ರೂ. ಕೊಡುವ ಭರವಸೆಯೊಂದಿಗೆ ಫೇಸ್ ಬುಕ್ ಮೂಲಕ ಬಿಹಾರದ ಅಜಿತ್ ಕಿಂಗ್ ಗುಂಪನ್ನು ಸಂಪರ್ಕಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಅಪರಾಧಕ್ಕಾಗಿ ಅಂಕಿತ್ ತನ್ನ ಸ್ನೇಹಿತನ ನೆರವನ್ನು ಸಹ ಪಡೆದಿದ್ದ ಜುಲೈ 12 ರಂದು ಅಂಕಿತ್, ಅಜಿತ್ ಸಿಂಗ್ ಖಾತೆಗೆ 10,000 ರೂ. ಪಾವತಿಸಿದ್ದ. ನಂತರ ಅಂಕಿತ್ ಮತ್ತು ಲೋಧಿ ಜಾನ್ಸಿ ರೈಲ್ವೆ ನಿಲ್ದಾಣದಲ್ಲಿ ಅಜಿತ್ ಸಿಂಗ್ ನನ್ನು ಬರಮಾಡಿಕೊಂಡಿದ್ದು, ಶಿವಪುರಿ ಜಿಲ್ಲೆಯ ಲಾಬೆದಾ ತಿರಾ ಪ್ರದೇಶದಲ್ಲಿ ಹಂತಕ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಲೋಧಿ ದೇಶಿ ನಿರ್ಮಿತ ಪಿಸ್ತೂಲ್ ವ್ಯವಸ್ಥೆ ಮಾಡಿದ್ದ.
ಜುಲೈ 21-22 ರಂದು ಹಂತಕರು ಮನೆಗೆ ಬರಲು ಅವಕಾಶ ನೀಡಲು ಅಂಕಿತ್ ತನ್ನ ಹೆಂಡತಿ ಮತ್ತು ಮಗಳನ್ನು ನೆಲ ಅಂತಸ್ಥಿನ ಮತ್ತೊಂದು ಕೊಠಡಿಯಲ್ಲಿ ಮಲಗಲು ಹೇಳಿದ್ದ. ಅಂಕಿತ್ ಪತ್ನಿ ಗುಂಡೇಟಿನ ಶಬ್ದ ಕೇಳಿ ಎಚ್ಚರವಾದಾಗ, ಅದು ಸಿಡಿಲಿನ ಶಬ್ದ ಎಂದ ಹೇಳಿದ್ದ. ಗುಪ್ತಾ ಅವರ ಕೊಲೆಯ ನಂತರ ಹಂತಕ ಮನೆಯಿಂದ ಹೊರಗೆ ಹೋದರೆ, ಅಂಕಿತ್ ಒಳಗಡೆಯಿಂದ ಮನೆ ಲಾಕ್ ಮಾಡಿದ್ದ. ಮಾರನೆ ದಿನ ಅಪರಿಚಿತ ದುಷ್ಕರ್ಮಿಗಳು ತನ್ನ ತಂದೆಯನ್ನು ಹತ್ಯೆ ಮಾಡಿರುವುದಾಗಿ ನೆರೆಹೊರೆಯವರಿಗೆ ಅಂಕಿತ್ ಕಥೆ ಕಟ್ಟಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement