ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 60 ಜನರ ಬಂಧನ; ಹೌರಾ ಪೊಲೀಸ್ ಕಮಿಷನರ್ ವರ್ಗಾವಣೆ!
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
Published: 12th June 2022 12:09 AM | Last Updated: 12th June 2022 12:31 AM | A+A A-

ಹೌರಾ ಹಿಂಸಾಚಾರ
ಕೋಲ್ಕತ್ತಾ: ಕೈಗಾರಿಕಾ ಜಿಲ್ಲೆ ಹೌರಾ, ಮುರ್ಷಿದಾಬಾದ್ ಜಿಲ್ಲೆಯ ಕೆಲವು ಭಾಗಗಳು ಮತ್ತು ದಕ್ಷಿಣ 24 ಪರಗಣಗಳಲ್ಲಿ ಹೊಸ ಹಿಂಸಾಚಾರ ನಡೆದಿದ್ದು ಕನಿಷ್ಠ 60 ಜನರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪಂಚಲಾ ಬಜಾರ್ ಪ್ರದೇಶದಲ್ಲಿ ಶನಿವಾರ ಹಿಂಸಾಚಾರ ವರದಿಯಾಗಿದ್ದು, ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿದ್ದು, ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ 60 ಜನರನ್ನು ಬಂಧಿಸಿ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಗಲಭೆ, ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂಸಾಚಾರ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರ ಬಂಧನ; ಶಾಂತಿ ಕಾಪಾಡುವಂತೆ ರಾಜ್ಯಪಾಲರ ಮನವಿ
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೂರಾರು ಪ್ರತಿಭಟನಾಕಾರರು ರಸ್ತೆಗಳು ಮತ್ತು ರೈಲು ಹಳಿಗಳನ್ನು ತಡೆದು ಹಿಂಸಾಚಾರ ನಡೆಸಿದ್ದು ಈ ಹಿನ್ನೆಲೆಯಲ್ಲಿ ಹೌರಾ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರವೀಣ್ ಕುಮಾರ್ ತ್ರಿಪಾಠಿ ಅವರು ಹೊಸ ಹೌರಾ ಸಿಪಿ ಮತ್ತು ಐಪಿಎಸ್ ಸ್ವಾತಿ ಭಂಗಾಲಿಯಾ ಅವರನ್ನು ಹೊಸ ಹೌರಾ ಗ್ರಾಮಾಂತರ ಎಸ್ಪಿಯಾಗಿ ನೇಮಿಸಿದರು. ಸಿ.ಸುಧಾಕರ್ ಅವರನ್ನು ಜಂಟಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ಮತ್ತು ಐಪಿಎಸ್ ಸೌಮ್ಯಾ ರಾಯ್ ಅವರನ್ನು ಕೋಲ್ಕತ್ತಾ ಪೊಲೀಸ್ನ ಎಸ್ಡಬ್ಲ್ಯೂ ಡಿಸಿಪಿಯನ್ನಾಗಿ ಮಾಡಲಾಗಿದ್ದು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.
ಹೌರಾದಲ್ಲಿ ಹಿಂಸಾಚಾರದ ನಂತರ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಪಶ್ಚಿಮ ಬಂಗಾಳ ಸರ್ಕಾರವು ಶನಿವಾರ ಮುರ್ಷಿದಾಬಾದ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಜೂನ್ 14 ರವರೆಗೆ ಸ್ಥಗಿತಗೊಳಿಸಿದೆ, ಅಂತಹ ನಿರ್ಬಂಧವು ಈಗಾಗಲೇ ಜಾರಿಯಲ್ಲಿದೆ.