ಟಿಕೆಟ್ ಇದ್ದರೂ ಪ್ರಯಾಣಕ್ಕೆ ಅವಕಾಶವಿಲ್ಲ, ಪರಿಹಾರವೂ ನಿರಾಕರಣೆ: ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ!
ನವದೆಹಲಿ: ಪ್ರಯಾಣಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾ ವಿಮಾನ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸರಿಯಾದ ಟಿಕೆಟ್ ಹೊಂದಿದ್ದರೂ ಪ್ರಯಾಣಿಕರಿಗೆ ಪ್ರಯಾಣ ಮಾಡಲು ಅವಕಾಶ ನೀಡದೇ ಇರುವ, ಈ ರೀತಿ ಅನನುಕೂಲ ಉಂಟಾದಾಗ ಪ್ರಯಾಣಿಕರು ತಲುಪುವ ಸ್ಥಳಗಳಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡುವುದು, ಅಥವಾ ಸೂಕ್ತ ಪರಿಹಾರ ನೀಡುವುದನ್ನು ಮಾಡದೇ ಇರುವ ಆರೋಪ ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕೇಳಿಬಂದಿತ್ತು.
ಡಿಜಿಸಿಎ ಈ ಬಗ್ಗೆ ಸರಣಿ ತಪಾಸಣೆ, ಪರಿಶೀಲನೆ ನಡೆಸಿದ್ದು, ಬೆಂಗಳೂರು, ಹೈದರಾಬಾದ್, ದೆಹಲಿಗಳಲ್ಲಿ ಪರಿಹಾರಕ್ಕೆ ಸಂಬಂಧಿಸಿದ ನಿಯಂತ್ರಣಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದ್ದು, ವಿಮಾನ ಸಂಸ್ಥೆಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ.
ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡದೇ ಇರುವ ಪ್ರಯಾಣಿಕರಿಗೆ ಒಂದು ಗಂಟೆಯ ಅವಧಿಯ ಒಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿಕೊಟ್ಟಲ್ಲಿ ಯಾವುದೇ ಪರಿಹಾರವನ್ನೂ ನೀಡಬೇಕಿಲ್ಲ. 24 ಗಂಟೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಲ್ಲಿ 10,000 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಡಿಜಿಸಿಎ ನಿಯಮಗಳ ಪ್ರಕಾರ 24 ಗಂಟೆಗಳ ನಂತರ ಪರಿಹಾರದ ಮೊತ್ತ 20,000 ರೂಪಾಯಿಗಳಿಗೆ ಏರಿಕೆ ಮಾಡಲಾಗುತ್ತದೆ
ಮೂಲಗಳ ಪ್ರಕಾರ ಭಾರತೀಯ ವಿಮಾನಗಳು ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿರುವುದರ ಪರಿಣಾಮ, ಸಾಮರ್ಥ್ಯಕ್ಕೂ ಮೀರಿ ಬುಕ್ ಮಾಡುತ್ತಿದ್ದು, ವಿಮಾನದಲ್ಲಿನ ಆಸನಗಳ ಸಾಮರ್ಥ್ಯಕ್ಕೂ ಮೀರಿ ಟಿಕೆಟ್ ಕಾಯ್ದಿರಿಸಲಾಗುತ್ತಿದ್ದು ಪ್ರಯಾಣಿಕರಿಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ.