ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ತಮ್ಮ ತವರು ರಾಜ್ಯವಾದ ತಮಿಳುನಾಡಿನಿಂದ ಮೇಲ್ಮನೆಗೆ ಹೊಸ ಅವಧಿಗೆ ಆಯ್ಕೆಯಾದ ನಂತರ ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ 41 ವಿಜೇತರಲ್ಲಿ ಚಿದಂಬರಂ ಅವರು ಸಹ ಒಬ್ಬರಾಗಿದ್ದಾರೆ.
"ತಮಿಳುನಾಡಿನಿಂದ ರಾಜ್ಯಸಭೆಗೆ ನಾನು ಆಯ್ಕೆಯಾದ ನಂತರ, ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದ ನನ್ನ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಅದರ ಪ್ರಕಾರ, ಇಂದು ನಾನು ಮಹಾರಾಷ್ಟ್ರದ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
"ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರು ನನ್ನ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ್ದು ನನ್ನ ಪುಣ್ಯ. ಭವಿಷ್ಯದಲ್ಲಿ ಮಹಾರಾಷ್ಟ್ರದ ಜನ ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತೇನೆ" ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
Advertisement