ನಿಮ್ಮಿಂದಾಗಿ ಅಸ್ಸಾಂ ಮರ್ಯಾದೆ ಹೋಗುತ್ತಿದೆ; ಮೊದಲು ಪ್ರವಾಹ ಪೀಡಿತ ರಾಜ್ಯ ತೊರೆಯಿರಿ: ಏಕನಾಥ್ ಶಿಂಧೆಗೆ ಅಸ್ಸಾಂ ಕಾಂಗ್ರೆಸ್ ಪತ್ರ
ಗುವಾಹಟಿ: ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರು ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದು, ನಿಮ್ಮಿಂದಾಗಿ ಪ್ರವಾಹದಿಂದ ತತ್ತರಿಸಿರುವ ಅಸ್ಸಾಂನ ಮಾನ ಮರ್ಯಾದೆ ಹೋಗುತ್ತಿದೆ. ಮೊದಲು ನೀವು ರಾಜ್ಯ ತೊರೆಯಿರಿ ಎಂದು ಕಾಂಗ್ರೆಸ್ ಘಟಕದ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ಶುಕ್ರವಾರ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿಯಲ್ಲೂ ಶಾಸಕರಿಗೆ ರಾಜ ಆತಿಥ್ಯ ಸಿಗುತ್ತಿದೆ. ಅಸ್ಸಾಂನಲ್ಲಿ ನಿಮ್ಮ ಉಪಸ್ಥಿತಿಯು ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಏಕನಾಥ್ ಶಿಂಧೆ ಅವರಿಗೆ ಬರೆದ ಪತ್ರದಲ್ಲಿ ಬೋರಾ ಹೇಳಿದ್ದಾರೆ.
ಇದು ಜನರು ನೈತಿಕತೆ ಮತ್ತು ಮೌಲ್ಯಗಳಿಗೆ ಹೆಚ್ಚಿನ ಗೌರವವನ್ನು ನೀಡುವ ಭೂಮಿಯಾಗಿದೆ. ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯ ಶಾಸಕರೊಂದಿಗೆ ಗುವಾಹಟಿಯಲ್ಲಿನ ಹೋಟೆಲ್ ನಲ್ಲಿ ನಿಮ್ಮ ಉಪಸ್ಥಿತಿ ಮಹಾರಾಷ್ಟ್ರದ ಚುನಾಯಿತ ಸರ್ಕಾರವನ್ನು ಉರುಳಿಸಲು ಕುದುರೆ ವ್ಯಾಪಾರದಲ್ಲಿ ತೊಡಗಿದೆ. ನೀವು ತಂಗಿರುವ ಹೊಟೇಲ್ ಮತ್ತು ನಿಮ್ಮ ಬಗೆಗಿನ ಮಾಧ್ಯಮ ಪ್ರಸಾರವು ಅಸ್ಸಾಮಿ ಜನರ ನೋವನ್ನು ತೋರಿಸಲು ಅಡ್ಡಿಯಾಗಿದೆ. ಅಸ್ಸಾಂ ವಿನಾಶಕಾರಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಅಸ್ಸಾಂ ಬಿಜೆಪಿ ಸರ್ಕಾರದ ವಿರುದ್ಧವೂ ಹರಿಹಾಯ್ದ ಕಾಂಗ್ರೆಸ್ ನಾಯಕ, ರಾಜ್ಯದ ಇಂತಹ ನಿರ್ಣಾಯಕ ಮತ್ತು ಶೋಚನೀಯ ಪರಿಸ್ಥಿತಿಯಲ್ಲಿ ಗುವಾಹಟಿಯಲ್ಲಿ ಶಿವಸೇನೆ ಶಾಸಕರ ಉಪಸ್ಥಿತಿ ಮತ್ತು ಅವರಿಗೆ ರಾಜ ಆತಿಥ್ಯವನ್ನು ನೀಡುವಲ್ಲಿ ಅಸ್ಸಾಂ ಸರ್ಕಾರ ಬಿಡುವಿಲ್ಲದ ಚಟುವಟಿಕೆಗಳು ತೊಡಗಿರುವುದು ಅನ್ಯಾಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ