ಮಹಾ ರಾಜಕೀಯ ಬಿಕ್ಕಟ್ಟು: ಅನರ್ಹತೆ ಅರ್ಜಿಗೆ ಸೋಮವಾರದೊಳಗೆ ಉತ್ತರಿಸುವಂತೆ ಶಿವಸೇನೆ ಬಂಡಾಯ ಶಾಸಕರಿಗೆ ಸಮನ್ಸ್

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹಿರಿಯ ಸಚಿವ ಏಕನಾಥ್ ಶಿಂಧೆ ಸೇರಿದಂತೆ ಶಿವಸೇನೆಯ 16 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಶನಿವಾರ `ಸಮನ್ಸ್' ಜಾರಿ...
ಶಿವಸೇನೆ ಬಂಡಾಯ ಶಾಸಕರು
ಶಿವಸೇನೆ ಬಂಡಾಯ ಶಾಸಕರು

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹಿರಿಯ ಸಚಿವ ಏಕನಾಥ್ ಶಿಂಧೆ ಸೇರಿದಂತೆ ಶಿವಸೇನೆಯ 16 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಶನಿವಾರ `ಸಮನ್ಸ್' ಜಾರಿ ಮಾಡಿದ್ದು, ತಮ್ಮ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಗೆ ಜೂನ್ 27ರ ಸಂಜೆಯೊಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಸಹಿ ಮಾಡಿರುವ ಪತ್ರದಲ್ಲಿ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಸೂಚಿಸಿದ ಎಲ್ಲಾ 16 ಶಾಸಕರಿಗೆ ಸಮನ್ಸ್ ನೀಡಲಾಗಿದೆ.

1986ರ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರ(ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ) ನಿಯಮಗಳ ಅಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಸುನೀಲ್ ಪ್ರಭು ಅವರು ವಿಧಾನಸಭೆಯ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರಿಗೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ರಾಜೇಂದ್ರ ಭಾಗವತ್ ಇಂದು ಹೊರಡಿಸಿದ ಸಮನ್ಸ್‌ನಲ್ಲಿ ತಿಳಿಸಿದ್ದಾರೆ.

"ಸಮನ್ಸ್‌ನಲ್ಲಿ ನಿಮ್ಮ ಪ್ರತಿವಾದವನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 27(ಸೋಮವಾರ) ಸಂಜೆ 5:30ರೊಳಗೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು. ಸಮನ್ಸ್‌ಗೆ ಲಿಖಿತ ಪ್ರತಿಕ್ರಿಯೆಯನ್ನು ನಿರ್ದಿಷ್ಟ ಅವಧಿಯಲ್ಲಿ ಸಲ್ಲಿಸದಿದ್ದರೆ, ನೀವು ಈ ಬಗ್ಗೆ ಹೇಳಲು ಎನೂ ಇಲ್ಲ ಎಂದು ಪರಿಗಣಿಸಲಾಗುವುದು. ನಿಮ್ಮ ವಿರುದ್ಧ ಪ್ರಭು ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕಚೇರಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತದೆ, ”ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಬಣದ ಬಂಡಾಯ ಶಾಸಕರಿಗೆ ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸುನೀಲ್ ಪ್ರಭು ಸೂಚಿಸಿದ್ದರು. ಆದರೆ ಬಂಡಾಯ ಶಾಸಕರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ಶಿವಸೇನೆಯ ಬಂಡಾಯ ನಾಯಕ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಾಸಕಾಂಗ ಕಾರ್ಯದರ್ಶಿಗೆ ಎರಡು ಪತ್ರಗಳನ್ನು ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com