ಮೊಹಮ್ಮದ್ ಜುಬೇರ್ ಬಂಧನ ಖಂಡಿಸಿದ ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್; ಇದು 'ತಾರತಮ್ಯದ ಕ್ರಮ' ಎಂದ ಜಮಿಯತ್
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮಂಗಳವಾರ...
Published: 28th June 2022 08:43 PM | Last Updated: 29th June 2022 01:46 PM | A+A A-

ಮೊಹಮ್ಮದ್ ಜುಬೈರ್
ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮಂಗಳವಾರ ತೀವ್ರವಾಗಿ ಖಂಡಿಸಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿವೆ.
"ಆನ್ಲೈನ್ ಮತ್ತು ಆಫ್ಲೈನ್" ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು ಭಾರತ G7 ಮತ್ತು ಇತರ ನಾಲ್ಕು ದೇಶಗಳೊಂದಿಗೆ ಸೇರಿದ ದಿನದಂದೇ ಜುಬೈರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಎರಡೂ ಮಾಧ್ಯಮ ಸಂಸ್ಥೆಗಳು ಗಮನಸೆಳೆದಿವೆ.
ಮೊಹಮ್ಮದ್ ಝುಬೈರ್ ಅವರನ್ನು ಐಪಿಸಿ ಸೆಕ್ಷನ್ 153, 295 ಅಡಿ ಬಂಧಿಸಲಾಗಿದೆ. ಇದು ನಿಜಕ್ಕೂ ಅಕ್ಷಮ್ಯ ಎಂದಿರುವ ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಮೊಹಮ್ಮದ್ ಝುಬೈರ್ ಸಾರಥ್ಯದ ಆಲ್ಟ್ ನ್ಯೂಸ್ ಸುಳ್ಳು ಸುದ್ದಿಗಳ ವಿರುದ್ಧ ಹಾಗೂ ತಪ್ಪು ಮಾಹಿತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿದೆ. ಹಲವು ವರ್ಷಗಳಿಂದ ಆಲ್ಟ್ ನ್ಯೂಸ್ ಮೂಲಕ ಸುದ್ದಿ ಸತ್ಯಾಂಶವನ್ನು ಜನತೆಗೆ ಪರಿಣಾಮಕಾರಿಯಾಗಿ ನೀಡಲಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಇದನ್ನು ಓದಿ: ಹಿಂದೂ ದೇವತೆ ವಿರುದ್ಧ ಪೋಸ್ಟ್: ಮೊಹಮ್ಮದ್ ಜುಬೇರ್ ಪೊಲೀಸ್ ಕಸ್ಟಡಿ ನಾಲ್ಕು ದಿನಕ್ಕೆ ವಿಸ್ತರಿಸಿದ ನ್ಯಾಯಾಲಯ
ಜನರಲ್ಲಿ ರಾಷ್ಟ್ರೀಯ ವಾದಿ ಭಾವನೆ ಕೆರಳಿಸಿ ಸಮಾಜದಲ್ಲಿ ಮತೀಯ ಧೃವೀಕರಣ ಮಾಡಲು ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಇದನ್ನು ಆಲ್ಟ್ ನ್ಯೂಸ್ ಪರಿಣಾಮಕಾರಿಯಾಗಿ ಬಯಲಿಗೆ ಎಳೆಯುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಇನ್ನು ಪ್ರಮುಖ ಮುಸ್ಲಿಂ ಸಂಘಟನೆ ಜಮಿಯತ್ ಉಲೇಮಾ-ಎ-ಹಿಂದ್ ಮಂಗಳವಾರ ಜುಬೇರ್ ಬಂಧನ "ತಾರತಮ್ಯದ ಕ್ರಮ" ಎಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿಯನ್ನು ಗೌರವಿಸುವ ವಿಷಯದಲ್ಲಿ ಸರ್ಕಾರ "ನ್ಯಾಯಯುತ ಕ್ರಮ" ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳ ಆರೋಪದ ಮೇಲೆ ಜುಬೇರ್ ಅವರನ್ನು ದೆಹಲಿ ಪೊಲೀಸ್ ವಿಶೇಷ ಸೆಲ್ ಸೋಮವಾರ ಬಂಧಿಸಿದೆ.