ನವದೆಹಲಿ: ಮಾಲಿನ್ಯ ಸಂಬಂಧಿತ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ.ಗಳನ್ನು ಆರ್ಥಿಕ ನೆರವು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾರ್ಮಿಕ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ಬುಧವಾರ ಸೂಚಿಸಿದ್ದಾರೆ.
ಮಾಲಿನ್ಯದ ಮಟ್ಟವು ಹದಗೆಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರದ ವಾಯು ಗುಣಮಟ್ಟದ ಸಮಿತಿಯು, ದೆಹಲಿ-ಎನ್ಸಿಆರ್ನಲ್ಲಿ ಅಗತ್ಯ ಯೋಜನೆಗಳು ಮತ್ತು GRAP III ಅಡಿಯ ಕೆಲವನ್ನು ಹೊರತುಪಡಿಸಿ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಶನಿವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
'ಈ ಅವಧಿಯಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ಇಲ್ಲದಿರುವಾಗ ಪ್ರತಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5000 ರೂಪಾಯಿ ಆರ್ಥಿಕ ನೆರವು ನೀಡುವಂತೆ ಕಾರ್ಮಿಕ ಸಚಿವ ಮನೀಷ್ ಸಿಸೋಡಿಯಾ ಅವರಿಗೆ ಸೂಚಿಸಿದ್ದೇನೆ' ಎಂದು ಕೇಜ್ರಿವಾಲ್ ಬುಧವಾರ ಟ್ವೀಟ್ ಮಾಡಿದ್ದಾರೆ.
ಎಎಪಿ ಸರ್ಕಾರವು ಈ ಹಿಂದೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಸಹಾಯವನ್ನು ನೀಡಿತ್ತು.
Advertisement