ನವದೆಹಲಿ: ದಟ್ಟ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯಲ್ಲಿ ಪರಿಸರ ತೀವ್ರ ರೀತಿಯಲ್ಲಿ ಹದಗೆಡುತ್ತಿರುವಂತೆಯೇ, ಪರಿಸ್ಥಿತಿ ನಿಭಾಯಿಸುವಲ್ಲಿ ದೆಹಲಿ ಹಾಗೂ ಕೇಂದ್ರ ಸರ್ಕಾರದ ನಡುವಣ ಸಮನ್ವಯತೆ, ಕಾಳಜಿ ಕೊರತೆಯನ್ನು ಸಂಸದ ವರುಣ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸಮಸ್ಯೆಯನ್ನು ಸರ್ಕಾರವಾಗಲಿ ಅಥವಾ ಜನರಾಗಲಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಉಸಿರಾಟ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಂದ ಆಸ್ಪತ್ರೆಗಳು ತುಂಬಿ ತುಳುಕಾಡುತ್ತಿವೆ ಎಂದು ಹೇಳಿದ್ದಾರೆ.
ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ 10 ಮಕ್ಕಳ ಪೈಕಿ 8 ಮಕ್ಕಳಿಗೆ ಉಸಿರಾಟದ ಸಮಸ್ಯೆಯಿದೆ. ಚರ್ಚೆ ನಡೆದ ಒಂದು ವರ್ಷದ ನಂತರವೂ ಅನೇಕ ಸರ್ಕಾರಿ ಘಟಕಗಳ ನಡುವಣ ಸಮನ್ವಯತೆಯ ಕೊರತೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಈ ಸಮಸ್ಯೆಯನ್ನು ಹೋಗಲಾಡಿಸದಿದ್ದಲ್ಲಿ ಗಾಳಿಯ ಗುಣಮಟ್ಟ ಕ್ಷಿಣಿಸುವುದರೊಂದಿಗೆ 46 ಮಿಲಿಯನ್ ಜನರ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗಲಿದೆ ಎಂದು ವರುಣ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
Advertisement