ಚೆನ್ನೈ: ಚೆನ್ನೈ ಸೆಂಟ್ರಲ್- ಏಕ್ತಾ ನಗರ (ಕೆವಾಡಿಯಾ) ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಒಂದು ಗಂಟೆಯ ನಂತರ, ಭಾನುವಾರ ಅರಕ್ಕೋಣಂ ಜಂಕ್ಷನ್ನಲ್ಲಿ 20 ನಿಮಿಷಗಳ ಕಾಲ ನಿಂತಿತು. ಕೊಳಕಾದ ಹೊದಿಕೆಗಳು ಮತ್ತು ದಿಂಬುಗಳ ದುರ್ವಾಸನೆಯನ್ನು ಸಹಿಸಲಾಗದೆ ಎಸಿ ಕೋಚ್ನಲ್ಲಿದ್ದ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದಾರೆ.
ಏಕ್ತಾ ನಗರಕ್ಕೆ ಹೋಗುವ ಸಾಪ್ತಾಹಿಕ ರೈಲು ರಾತ್ರಿ 10.40ಕ್ಕೆ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟಿತ್ತು. ರೇಣಿಗುಂಟದಲ್ಲಿ 1.40ಕ್ಕೆ ಮೊದಲ ನಿಲುಗಡೆ ನಿಗದಿಯಾಗಿತ್ತು. ಆದರೆ, ರಾತ್ರಿ 11.40ಕ್ಕೆ ಅರಕ್ಕೋಣಂನ ಪ್ಲಾಟ್ಫಾರ್ಮ್ ಒಂದರಲ್ಲಿ ನಿಂತಿತು. 20ಕ್ಕೂ ಹೆಚ್ಚು ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿ ಜಮಾಯಿಸಿ ರೈಲ್ವೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಅರಕ್ಕೋಣಂ ಜಿಆರ್ಪಿ ಮತ್ತು ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರನ್ನು ಸಮಾಧಾನಪಡಿಸಿದರು.
2ನೇ ಎಸಿ ಮತ್ತು 3ನೇ ಎಸಿ ಕೋಚ್ಗಳ ಆರು ಬೋಗಿಗಳ ಪ್ರಯಾಣಿಕರು ದಿಂಬುಗಳು ಮತ್ತು ಬೆಡ್ರೋಲ್ಗಳು ಅನೈರ್ಮಲ್ಯ ಮತ್ತು ದುರ್ವಾಸನೆಯಿಂದ ಕೂಡಿವೆ ಎಂದು ಆರೋಪಿಸಿದರು.
'ಎಸಿ ಕೋಚ್ಗಳು ತುಂಬಾ ಕೋಲ್ಡ್ ಆಗಿದ್ದವು. ಬೆಡ್ರೋಲ್ಗಳು ದುರ್ವಾಸನೆಯಿಂದ ಕೂಡಿದ್ದರಿಂದ ವೃದ್ಧರು ಮತ್ತು ಮಕ್ಕಳು ಮಲಗಲು ಸಾಧ್ಯವಾಗಲಿಲ್ಲ. ದಿಂಬಿನ ಕವರ್ಗಳಿಂದ ದುರ್ವಾಸನೆ ಬರುತ್ತಿತ್ತು. ಸೆಂಟ್ರಲ್ನಲ್ಲಿ ದೂರು ಸಲ್ಲಿಸಿದ್ದರೂ, ಹೊದಿಕೆಗಳು ಮತ್ತು ದಿಂಬುಗಳನ್ನು ಬದಲಾಯಿಸಲಾಗಿಲ್ಲ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಮತ್ತೆ ಪ್ರಯಾಣ ಆರಂಭಿಸುವ ಮುನ್ನ ದಿಂಬನ್ನು ಬದಲಿಸುವಂತೆ ಪ್ರಯಾಣಿಕರು ಒತ್ತಾಯಿಸಿದರು. ಬೆಡ್ರೋಲ್ಗಳನ್ನು ಬದಲಾಯಿಸುವಂತೆ ಚೆನ್ನೈ ವಿಭಾಗದ ಅಧಿಕಾರಿಗಳು ಗುಂತಕಲ್ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೇಣಿಗುಂಟಾ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರ ಬೆಡ್ರೋಲ್ಗಳನ್ನು ಬದಲಿಸಲು ರೈಲ್ವೇ ಉದ್ಯೋಗಿಯನ್ನು ನಿಯೋಜಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಚೆನ್ನೈ ವಿಭಾಗದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement