ರೈಲ್ವೆಯಲ್ಲಿ ಕಾಗದರಹಿತ ಡಿಜಿಟಲ್ ವ್ಯವಸ್ಥೆ ಜಾರಿ, 9 ಸಾವಿರ ಸ್ವಚ್ಛತಾ ಅಭಿಯಾನಗಳು

ಭಾರತೀಯ ರೈಲ್ವೆಯಲ್ಲಿ ಕೊನೆಗೂ ಕಾಗದರಹಿತ ವ್ಯವಸ್ಥೆ ಜಾರಿಗೆ ಬಂದಿದೆ. ಅದರ ಎಲ್ಲಾ ವಿಭಾಗಗಳು ನವೆಂಬರ್ 1ರಿಂದ ಡಿಜಿಟಲ್ ಆಗಿವೆ. ಅದರ ವಿವಿಧ ಇಲಾಖೆಗಳಲ್ಲಿನ ಎಲ್ಲಾ ರೀತಿಯ ಪತ್ರವ್ಯವಹಾರಗಳನ್ನು ಸಹ ಇ-ಕಚೇರಿ ವ್ಯವಸ್ಥೆಯಲ್ಲಿ ಇ-ಫೈಲಿಂಗ್ ಮೂಲಕ ಮಾಡಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕೊನೆಗೂ ಕಾಗದರಹಿತ ವ್ಯವಸ್ಥೆ ಜಾರಿಗೆ ಬಂದಿದೆ. ಅದರ ಎಲ್ಲಾ ವಿಭಾಗಗಳು ನವೆಂಬರ್ 1ರಿಂದ ಡಿಜಿಟಲ್ ಆಗಿವೆ. ಅದರ ವಿವಿಧ ಇಲಾಖೆಗಳಲ್ಲಿನ ಎಲ್ಲಾ ರೀತಿಯ ಪತ್ರವ್ಯವಹಾರಗಳನ್ನು ಸಹ ಇ-ಕಚೇರಿ ವ್ಯವಸ್ಥೆಯಲ್ಲಿ ಇ-ಫೈಲಿಂಗ್ ಮೂಲಕ ಮಾಡಲಾಗುತ್ತಿದೆ.

ನಿನ್ನೆ ಶುಕ್ರವಾರ ವಿಶೇಷ ಸ್ವಚ್ಛತಾ ಅಭಿಯಾನದ ನಿಮಿತ್ತ ರೈಲ್ವೆ ಸೇರಿದಂತೆ 16 ಸಚಿವಾಲಯಗಳ ಅಧಿಕಾರಿಗಳೊಂದಿಗೆ ಮಾಧ್ಯಮ ಸಂವಾದ ನಡೆಸಲಾಯಿತು. ರೈಲ್ವೆಯ ಕಾಗದರಹಿತ ಉಪಕ್ರಮದ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಮಂಡಳಿಯ ಅಧ್ಯಕ್ಷ ವಿಕೆ ತ್ರಿಪಾಠಿ, ಎಲ್ಲಾ ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಡಿಜಿಟಲ್ ವಿಧಾನ ಕಚೇರಿ ಕೆಲಸಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ವಿಶೇಷ ಸ್ವಚ್ಛತಾ ಅಭಿಯಾನ-2.0ವನ್ನು ಮೊನ್ನೆ ಅಕ್ಟೋಬರ್ 31ರಂದು ನಡೆಸಲಾಗಿತ್ತು. ಅಭಿಯಾನದ ಸಂದರ್ಭದಲ್ಲಿ, ತ್ರಿಪಾಠಿ ಮಾತನಾಡಿ, ರೈಲ್ವೆಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಸಾಮೂಹಿಕ ಯಾಂತ್ರೀಕೃತ ಶುಚಿಗೊಳಿಸುವಿಕೆಯನ್ನು ನಡೆಸಿತು. ಇದಷ್ಟೇ ಅಲ್ಲ, ರೈಲ್ವೆಯು 2.45 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಿದೆ. ಪ್ರಯಾಣಿಕರಿಗೆ ಸುಲಭವಾಗಿಸಲು 55 ನಿಯಮಗಳನ್ನು ಸರಳೀಕರಿಸಿದೆ. ಕಡತಗಳು ಮತ್ತು ಅನುಪಯುಕ್ತ ವಸ್ತುಗಳನ್ನು ತೆಗೆದುಹಾಕುವ ಮೂಲಕ ನಾವು 20,349 ಚದರ ಅಡಿ ಜಾಗವನ್ನು ರಚಿಸಿದ್ದೇವೆ ಎಂದು ತ್ರಿಪಾಠಿ ಹೇಳಿದರು.

ದೇಶದ ಎಲ್ಲಾ 7,337 ರೈಲು ನಿಲ್ದಾಣಗಳು ಈಗ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಗಳೊಂದಿಗೆ ಯಾಂತ್ರಿಕೃತ ಶುಚಿಗೊಳಿಸುವ ವ್ಯವಸ್ಥೆಯನ್ನು ಹೊಂದಿವೆ. ಇಲ್ಲಿಯವರೆಗೆ, ಅಭಿಯಾನದ ಭಾಗವಾಗಿ 1.86 ಲಕ್ಷಕ್ಕೂ ಹೆಚ್ಚು ಭೌತಿಕ ಫೈಲ್‌ಗಳು ಮತ್ತು ಸುಮಾರು 3000 ಇ-ಫೈಲ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ಹೇಳಿದರು.

ವಿಶೇಷ ಸ್ವಚ್ಛತಾ ಅಭಿಯಾನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ರೈಲ್ವೆಯ ಎಲ್ಲಾ ನಿಲ್ದಾಣಗಳು, ಕಚೇರಿಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡ 9 ಸಾವಿರಕ್ಕೂ ಹೆಚ್ಚು ಸ್ವಚ್ಛತಾ ಅಭಿಯಾನಗಳನ್ನು ನಡೆಸಿದೆ. ಇದಲ್ಲದೆ ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಸ್ಕ್ರ್ಯಾಪ್‌ಗಳು ಮತ್ತು ಇತರ ಅನುಪಯುಕ್ತ ಕಡತಗಳು ಮತ್ತು ಸಾಮಗ್ರಿಗಳ ವಿಲೇವಾರಿಯಿಂದ ರೈಲ್ವೆಯು 33 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ.

ಸ್ವಚ್ಛತಾ ಅಭಿಯಾನದ ಭಾಗವಾಗಿ, ರೈಲ್ವೆಯು ಬೆಂಗಳೂರು ನಿಲ್ದಾಣದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಶಿಲ್ಪವನ್ನು ತಯಾರಿಸಿದ್ದು, ಪ್ರಯಾಣಿಕರಿಗೆ ನೀರಿನ ಬಾಟಲಿಗಳನ್ನು ಗೊತ್ತುಪಡಿಸದ ಸ್ಥಳಗಳಲ್ಲಿ ಎಸೆಯಬೇಡಿ ಎಂದು ಸಂದೇಶವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಇದನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com