ಬಲೂನ್ ಗೆ ಗಾಳಿ ತುಂಬಲು ಬರಬೇಡಿ: ಕಾರ್ಯಕ್ರಮಗಳಿಗೆ ಹೋಗುವುದು, ನಾಯಕರನ್ನು ಭೇಟಿ ಮಾಡುವುದು ಹೇಗೆ ಬಣ ರಾಜಕೀಯವಾಗುತ್ತದೆ? ತರೂರ್ ಕಿಡಿ
ಮಾಧ್ಯಮಗಳು ಬಯಸಿದರೆ ನಾನು ಸೂಜಿ ನೀಡಲು ಸಿದ್ದನಿದ್ದೇನೆ, ಸುಳ್ಳು ಸುದ್ದಿ ವರದಿಗಳು ತಮ್ಮಂತಹ ನಾಯಕರನ್ನು ನಾಶಮಾಡಲು ಸಾಧ್ಯವಿಲ್ಲ. ಏಕೆಂದರೆ ಸೂಜಿಯಿಂದ ಚುಚ್ಚಲು ನಾವು ಗಾಳಿ ತುಂಬಿರುವ ಬಲೂನುಗಳು ಅಲ್ಲ ಎಂದಿದ್ದಾರೆ.
Published: 23rd November 2022 02:54 PM | Last Updated: 26th November 2022 01:42 PM | A+A A-

ಶಶಿ ತರೂರ್
ಕಣ್ಣೂರು: ಇಬ್ಬರು ಕಾಂಗ್ರೆಸ್ ಸಂಸದರು ಕಾರ್ಯಕ್ರಮಗಳಿಗೆ ಹೋಗುವುದು, ಪ್ರಮುಖ ನಾಯಕರನ್ನು ಭೇಟಿ ಮಾಡುವುದು ಹೇಗೆ ಭಿನ್ನಮತೀಯ ಚಟುವಟಿಕೆಯಾಗುತ್ತದೆ ಎಂದು ಸಂಸದ ಶಶಿ ತರೂರ್ ಕಿಡಿ ಕಾರಿದ್ದಾರೆ.
ಸಂಸದ ಎಂ ಪಿ ರಾಘವನ್ ಅವರ ಜೊತೆಗೆ ಶಶಿ ತರೂರ್ ಕೇರಳದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಹಾಗೂ ಕೆಲವು ಪ್ರಮುಖ ನಾಯಕರುಗಳನ್ನು ಭೇಟಿ ಮಾಡಿದ್ದರು. ಇಬ್ಬರು ನಾಯಕರು ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಅದು ಭಿನ್ನಮತೀಯ ಚಟುವಟಿಗೆ ಹೇಗಾಗುತ್ತದೆ, ಮಾಧ್ಯಮಗಳಲ್ಲಿ ಸೃಷ್ಟಿಯಾಗುತ್ತಿರುವ ಕೆಲವು ವಿಷಯಗಳ ಬಗ್ಗೆ ತರೂರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಕ್ಷವು ಯಾವುದೇ 'ಬಣ ರಾಜಕೀಯ'ವನ್ನು ಸಹಿಸುವುದಿಲ್ಲ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮಂಗಳವಾರ ಎಚ್ಚರಿಕೆ ನೀಡಿದ ನಂತರ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಸಂಸದರ ಚಟುವಟಿಕೆಗಳನ್ನು ಹೇಗೆ ಭಿನ್ನಮತೀಯ ಚಟುವಟಿಕೆ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ತಲಶ್ಶೇರಿ ಆರ್ಚ್ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಅವರನ್ನು ಭೇಟಿಯಾದ ನಂತರ ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ನಾನು ಮತ್ತು ರಾಘವನ್ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೆಲವರು ಮಾಧ್ಯಮಗಳ ಮೂಲಕ ಹೇಳಿರುವುದನ್ನು ಕೇಳಲು ಬೇಸರವಾಯಿತು ಎಂದಿದ್ದಾರೆ.
ಮಾಧ್ಯಮದವರು ಬಲೂನ್ನಲ್ಲಿ ಗಾಳಿ ತುಂಬಲು ಇಲ್ಲಿಗೆ ಬಂದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಮತ್ತು ರಾಘವನ್ ಭಿನ್ನ ಮತೀಯ ಚಟುವಟಿಕೆಗಳಲ್ಲಿ ತೊಡಗಿದ್ದೇವೆ ಎಂದು ಕೆಲವರು ಹೇಳುತ್ತಿರುವ ಬಗ್ಗೆ , ಅದನ್ನು ನೀವು ಕೇಳುವ ಬಗ್ಗೆ ನಮಗೆ ಬೇಸರ ಬಂದಿದೆ. ಭಿನ್ನ ಮತೀಯ ಚಟುವಟಿಕೆಗಳು ಯಾವುವು ಎಂದು ತಿಳಿಯಲು ಬಯಸುತ್ತೇನೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪಕ್ಷದ ನಿರ್ದೇಶನಕ್ಕೆ ವಿರುದ್ಧವಾಗಿ ನಾವು ಏನು ತಪ್ಪು ಮಾಡಿದ್ದೇವೆ, ಮಾಧ್ಯಮಗಳಲ್ಲಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ, ಇದರಿಂದ ನನಗೆ ಕಿರಿಕಿರಿಯಾಗಿದೆ, ಮಾಧ್ಯಮಗಳು ಬಯಸಿದರೆ ನಾನು ಸೂಜಿ ನೀಡಲು ಸಿದ್ದನಿದ್ದೇನೆ, ಸುಳ್ಳು ಸುದ್ದಿ ವರದಿಗಳು ತಮ್ಮಂತಹ ನಾಯಕರನ್ನು ನಾಶಮಾಡಲು ಸಾಧ್ಯವಿಲ್ಲ. ಏಕೆಂದರೆ ಸೂಜಿಯಿಂದ ಚುಚ್ಚಲು ನಾವು ಗಾಳಿ ತುಂಬಿರುವ ಬಲೂನುಗಳು ಅಲ್ಲ ಎಂದಿದ್ದಾರೆ.
ನಾವು ಪ್ರತಿಯೊಬ್ಬರನ್ನು ಗೌರವಿಸುತ್ತೇವೆ ಎಂದು ತರೂರ್ ಬೆಂಬಲಿಗ ಕೆಕೆ ರಾಘವನ್ ಹೇಳಿದ್ದಾರೆ. ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಎಲ್ಲಿಯೂ ಹೋಗಿ ಮಾತನಾಡುವುದು ನನಗೆ ಸಮಸ್ಯೆಯಲ್ಲ ಎಂದು ಹೇಳುವ ಮೂಲಕ ಅವರು ಅನುಭವಿಸುತ್ತಿರುವ ಜನಬೆಂಬಲದ ಬಗ್ಗೆ ಸುಳಿವು ನೀಡಿದರು.
ಇದನ್ನೂ ಓದಿ: ಗುಜರಾತ್ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಶಶಿ ತರೂರ್; ಪಕ್ಷದ ಹಲವು ನಾಯಕರಲ್ಲಿ ಅಸಮಾಧಾನ!
ಪ್ರತಿ ವಾರ ಸುಮಾರು 40 ಕಾರ್ಯಕ್ರಮಗಳಿಗೆ ಆಹ್ವಾನಗಳು ಬರುತ್ತವೆ , ಆದರೆ ಕೇವಲ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಏಕೆ ಭಿನ್ನಮತೀಯ ಚಟುವಟಿಕೆ ಎಂದು ಹೇಳುತ್ತಾರೋ ತಿಳಿಯುತ್ತಿಲ್ಲ, ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಲು ಸಾಧ್ಯವಿಲ್ಲ, ಈ ಬಾರಿ ಮಲಪ್ಪುರಂ ನ ಕಾರ್ಯಕ್ರಮಗಳಿಗೆ ಹೋಗಲು ರಾಘವನ್ ಸಲಹೆ ನೀಡಿದರು, ಇಲ್ಲಿಗೆ ಭೇಟಿ ನೀಡುವುದು ಸೂಕ್ತ ಎನ್ನಿಸಿತು, ಹಾಗಾಗಿ ಅಲ್ಲಿಗೆ ಭೇಟಿ ನೀಡಿದೆವು ಎಂದು ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ.
ಇಬ್ಬರು ಕಾಂಗ್ರೆಸ್ ಸಂಸದರು ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿದ್ದರೆ ಯಾರಿಗೆ ಏನು ತೊಂದರೆಯಾಗಿದೆ ಮತ್ತು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ, ಆದರೆ ಪಕ್ಷದ ಯಾರೊಬ್ಬರ ವಿರುದ್ಧ ನಾನು ಕೆಲಸ ಮಾಡುತ್ತಿಲ್ಲ ಎಂದು ತರೂರ್ ಸ್ಪಷ್ಟ ಪಡಿಸಿದರು.
ನನಗೆ ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಅವರು, ತಮ್ಮ 14 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರ ವಿರುದ್ಧವೂ ಕೆಟ್ಟದಾಗಿ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ, ನನಗೆ ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ನಾನು ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ.