ಮೂರು ತಿಂಗಳಿಂದ ತಪಸ್ಸು ಮಾಡುತ್ತಿದ್ದೇನೆ: ಮಹಾಕಾಲೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಾಲ್ಕು ದಿನಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಉಜ್ಜಯಿನಿಯ ಮತ್ತೊಂದು ಜ್ಯೋತಿರ್ಲಿಂಗ ಕ್ಷೇತ್ರವಾದ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.
ಉಜ್ಜಯಿನಿಯ ಮಹಾಕಾಲೇಶ್ವ್ರ ದೇಗುಲಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಉಜ್ಜಯಿನಿಯ ಮಹಾಕಾಲೇಶ್ವ್ರ ದೇಗುಲಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಾಲ್ಕು ದಿನಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಉಜ್ಜಯಿನಿಯ ಮತ್ತೊಂದು ಜ್ಯೋತಿರ್ಲಿಂಗ ಕ್ಷೇತ್ರವಾದ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.

ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ತಪಸ್ಸಿನ ಪರಿಕಲ್ಪನೆಯ ಬಗ್ಗೆ ಮಾತನಾಡಿದರು. 'ಇದು ತಪಸ್ವಿಗಳನ್ನು (ವಿರಕ್ತರನ್ನು) ಪೂಜಿಸುವ ದೇಶ. ನಾನು ಕಳೆದ ಮೂರು ತಿಂಗಳಿಂದ ತಪಸ್ಸು ಮಾಡುತ್ತಿದ್ದೇನೆ ಎಂದು ಅವರು ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ಹೇಳಿದರು.

ಆದರೆ, ಕೊನೆಯ ಉಸಿರು ಇರುವವರೆಗೂ ನಿಜವಾದ ತಪಸ್ಸು ಮಾಡುವ ರೈತರು ಮತ್ತು ಕಾರ್ಮಿಕ ತಪಸ್ವಿಗಳ ಮುಂದೆ ನನ್ನ ತಪಸ್ಸು ತುಂಬಾ ಚಿಕ್ಕದಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಕಾಣಿಸಿಕೊಂಡ, ತಮ್ಮ ಜೀವನದುದ್ದಕ್ಕೂ ದುಡಿಯುವ ವಲಸೆ ಕಾರ್ಮಿಕರೇ ನಿಜವಾದ ತಪಸ್ವಿಗಳು' ಎಂದು ಅವರು ಹೇಳಿದರು.

ಆದರೆ, ಅವರರ್ಯಾರಿಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ ಅಥವಾ ಸಿಕ್ಕರೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಅವರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯುತ್ತಿಲ್ಲ ಅಥವಾ ಸಂಪೂರ್ಣ ಪ್ರೀಮಿಯಂ ಪಾವತಿಸಿದ್ದರೂ, ಹಾನಿಗೊಳಗಾದ ಬೆಳೆಗಳಿಗೆ ವಿಮಾ ಕಂಪನಿಗಳಿಂದ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ತಿಳಿಸಿದರು.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ ರಾಹುಲ್, 'ಹಾಗಾದರೆ ತಪಸ್ಸಿನ ಫಲವನ್ನು ಯಾರು ಪಡೆಯುತ್ತಿದ್ದಾರೆ? ಹಗಲಿರುಳು ನರೇಂದ್ರ ಮೋದಿಯವರ ತಪಸ್ಸು ಮಾಡುವ ಇಬ್ಬರು ವ್ಯಕ್ತಿಗಳು ಸರ್ಕಾರದಿಂದ ತಮಗೆ ಬೇಕಾದುದನ್ನು ಪಡೆಯುತ್ತಿದ್ದಾರೆ. ರೈಲ್ವೆ ಮತ್ತು ವಿಮಾನ ನಿಲ್ದಾಣಗಳಿಂದ ರಸ್ತೆಗಳು, ವಿದ್ಯುತ್ ಮತ್ತು ನೀರಿನವರೆಗೆ ವ್ಯಾಪಿಸಿದ್ದು, ಅವರು ಬಯಸಿದ್ದನ್ನು ಪಡೆಯುತ್ತಿದ್ದಾರೆ' ಎಂದು ದೂರಿದರು.

ಸಭೆಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಕಮಲ್ ನಾಥ್ ಅವರು, ತಮ್ಮ ಸರ್ಕಾರವನ್ನು ಮಾರ್ಚ್ 2020 ರಲ್ಲಿ 15 ತಿಂಗಳಲ್ಲಿ ಹೇಗೆ ಉರುಳಿಸಲಾಯಿತು ಎಂದು ವಿವರಿಸಿದರು. 'ನನ್ನ ಚುನಾಯಿತ ಸರ್ಕಾರವನ್ನು ಒಪ್ಪಂದದ ಮೂಲಕ ಕೆಳಗಿಳಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದೆ ಮತ್ತು ನಾನು ಸಹ ಒಪ್ಪಂದ ಮಾಡಿಕೊಳ್ಳಬಹುದಿತ್ತು. ಆದರೆ, ಅಂತಹ ಒಪ್ಪಂದಗಳನ್ನು ಮಧ್ಯ ಪ್ರದೇಶದ ಗುರುತಾಗಿ ಮಾಡದಿರಲು ನಾನು ನಿರ್ಧರಿಸಿದ್ದೇನೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com