ಹೊಸ ಭಾಷಾ ಸಮರ ಆರಂಭಿಸಬೇಡಿ, ದೇಶದಲ್ಲಿ ಏಕತೆ ಎತ್ತಿ ಹಿಡಿಯಿರಿ: ಕೇಂದ್ರಕ್ಕೆ ತಮಿಳು ನಾಡು ಸಿಎಂ ಸ್ಟಾಲಿನ್ ಒತ್ತಾಯ
ಚೆನ್ನೈ: ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿ ಹೇರುವ ಮೂಲಕ ಮತ್ತೊಂದು “ಭಾಷಾ ಯುದ್ಧ” ಆರಂಭಿಸುವುದರ ವಿರುದ್ಧ ಕೇಂದ್ರ ಸರ್ಕಾರವನ್ನು ಎಚ್ಚರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಬಿಟ್ಟು ಭಾರತದ ಏಕತೆಯನ್ನು ಎತ್ತಿ ಹಿಡಿಯುವಂತೆ ಪ್ರಧಾನಿ ಮೋದಿ ಮತ್ತು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿಯು ಎಲ್ಲಾ ಕೇಂದ್ರೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಬೇಕೆಂಬ ಶಿಫಾರಸಿನ ಕುರಿತು ಸುದ್ದಿ ವರದಿಗಳಿಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಐಐಟಿಗಳು, ಐಐಎಂಗಳು, ಎಐಐಎಂಎಸ್ ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿವೆ. ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರುವ ಮೂಲಕ ದೇಶದ ಏಕತೆಗೆ ಇದು ಅಡ್ಡಿಯನ್ನುಂಟುಮಾಡುತ್ತದೆ. ಸಮಿತಿಯು ಭಾರತದಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿದೆ ಎಂದು ಹೇಳಿದರು.
ಸಂವಿಧಾನದ ಎಂಟನೇ ಶೆಡ್ಯೂಲ್ ತಮಿಳು ಸೇರಿದಂತೆ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸುವ ಅರ್ಹತೆ ಎಂದು ಪಟ್ಟಿ ಮಾಡಿದೆ ಎಂದು ಗಮನಸೆಳೆದ ಸ್ಟಾಲಿನ್ ಅವರು, ಸಮಿತಿಯು ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯಾಗಿ ಶಿಫಾರಸು ಮಾಡುವ ಅವಶ್ಯಕತೆ ಎಲ್ಲಿಂದ ಉದ್ಭವಿಸಿತು ಎಂದು ಕೇಳಿದರು. "ಹಿಂದಿಗೆ ಆದ್ಯತೆ ನೀಡಲು ಕೇಂದ್ರ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ಏಕೆ ಸ್ಥಗಿತಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಇಡೀ ದೇಶಕ್ಕೆ ಒಂದು ಭಾಷೆಯನ್ನು ಸಾಮಾನ್ಯವಾಗಿಸುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ಪ್ರತಿಪಾದಿಸಿದ ಅವರು, ಅದನ್ನು ಕಡ್ಡಾಯಗೊಳಿಸುವುದು ಕೇವಲ ಹಿಂದಿ ಭಾಷಿಕರು ಮಾತ್ರ ಭಾರತದ ನಿಜವಾದ ನಾಗರಿಕರು ಎಂದು ಹೇಳುವುದು, ಇತರ ಭಾಷೆಗಳನ್ನು ಮಾತನಾಡುವವರು ಎರಡನೇ ದರ್ಜೆಯ ನಾಗರಿಕರು ಎಂದು ಹೇಳುವುದು ಸರಿಯಲ್ಲ ಎಂದು ಸ್ಟಾಲಿನ್ ಕೇಂದ್ರದ ನಡೆಯನ್ನು ವಿರೋಧಿಸಿದ್ದಾರೆ.